ಚಿತ್ರಸಂಗೀತ

ಗಾಯಕ ರಮೇಶ್ ಚಂದ್ರ…ನಮ್ಮ ನಿರ್ದೇಶಕರಿಗೆ ಮರೆತುಹೋದ್ರಾ?

PLAYBACK SINGER RAMESH CHANDRA-SINGER (2)-ಚಿನ್ಮಯ ಎಂ.ರಾವ್

ಪ್ರತಿಭಾವಂತರನ್ನು ಮರೆತು ಬಿಡುವುದರಲ್ಲಿ ಕನ್ನಡ ಚಿತ್ರರಂಗ ಮುಂಚೂಣಿಯಲ್ಲಿದೆ ಎನ್ನಬಹುದು. ಮೂರು ಮತ್ತೊಂದು ಮಂದಿಯನ್ನೇ ಸದಾ ಮೇಲಕ್ಕೆತ್ತಿ ಮೆರೆಸುವ ನಿರ್ಮಾಪಕರು, ನಿರ್ದೇಶಕರು ಒಮ್ಮೊಮ್ಮೆ ಒಳ್ಳೆಯ ಕಲಾವಿದರನ್ನೇ ನಿಧಾನವಾಗಿ ಮರೆತು ಬಿಡುತ್ತಾರೆ. ಹೀಗೆ ಮರೆತು ಹೋದಂಥಹ ಅಥವಾ ಮರೆಗೆ ಸರಿಸಲ್ಪಟ್ಟಂಥಹ ಮಧುರಕಂಠದ ಗಾಯಕ ರಮೇಶ್ ಚಂದ್ರ ಅವರನ್ನು ಮತ್ತೆ ಮುಂದಿನ ಸಾಲಿಗೆ ತರುವತ್ತ ಕನ್ನಡ ಚಿತ್ರರಂಗದವರು ಗಂಭೀರವಾಗಿ ಯೋಚಿಸಬೇಕಾಗಿದೆ.

ಗಡಿನಾಡು ಕಾಸರಗೋಡಿನಿಂದ ಎರಡು ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದ ರಮೇಶ್ ಚಂದ್ರ ತಾನೊಬ್ಬ ಸಮರ್ಥ ಹಿನ್ನೆಲೆ ಗಾಯಕ ಎಂಬುದನ್ನು ಹಲವಾರು ಬಾರಿ ಸಾಬೀತುಪಡಿಸಿದ್ದಾರೆ. ಅನುರಾಗ ಸಂಗಮ ಚಿತ್ರದ “ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ..ಸದಾ ಸದಾ..”ಎನ್ನುತ್ತಾ ಕನ್ನಡಿಗರ ಮನದಲ್ಲಿ ನೆಲೆ ನಿಂತ ಈ ಗಾಯಕ ರವಿಚಂದ್ರನ್ ಅವರ ಮಾಂಗಲ್ಯಮ್ ತಂತು ನಾನೇನಾ ಚಿತ್ರದಲ್ಲಿ ಹಾಡಿದ್ದ “ಸುಮತಿ ಸುಮತಿ ಶ್ರೀಮತಿ..” ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಅತ್ಯುತ್ತಮ ಹಿನ್ನೆಲೆ ಗಾಯಕನೆಂದು ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದ ಇವರ ಗಾಯನದ ಸೊಬಗನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಅವರನ್ನು ಬಳಕೆಗೆ ತಂದಿದ್ದು ಸಂಗೀತ ನಿರ್ದೇಶಕ ವಿ.ಮನೋಹರ್ ಮಾತ್ರ.

ನಾಡಿನಾದ್ಯಂತ ಸುಗಮ ಸಂಗೀತ ಶಿಕ್ಷಣವನ್ನೂ ಹಾಗು ಕಾರ್ಯಕ್ರಮಗಳನ್ನೂ ನೀಡುತ್ತಾ ಜನಪ್ರಿಯವಾಗಿರುವ ರಮೇಶ್ ಚಂದ್ರ ಈ ವರ್ಷವಾದರೂ ಸೂಪರ್ ಹಿಟ್ ಗೀತೆಯೊಂದಕ್ಕೆ ದನಿಯಾಗಿ ಮತ್ತೊಮ್ಮೆ ಜನಮಾನಸದಲ್ಲಿ ನೆಲೆ ನಿಂತು ಜನಮನ್ನಣೆ ಗಳಿಸುವಂತಾಗಲಿ ಎಂದು ಆಶಿಸೋಣ.

-ಚಿನ್ಮಯ ಎಂ.ರಾವ್

29-2-2012

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.