ದೇಶ-ವಿದೇಶ

ನವೆಂಬರ್ 19ರಂದು ಅರಬ್ಬರ ನಾಡಲ್ಲಿ ‘ವಿಶ್ವ ಕನ್ನಡ ಹಬ್ಬ’ – ದುಬೈನಲ್ಲಿ ಪಸರಿಸಲಿದೆ ಕನ್ನಡದ ಕಂಪು

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡಿಗರು ದುಬಾಯಿ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 19ರಂದು ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಈ ಬಾರಿಯ ‘ವಿಶ್ವ ಕನ್ನಡ ಹಬ್ಬ’ದ ಲೋಗೋ ಬಿಡುಗಡೆಯಾಗಿದ್ದು ಕಾರ್ಯಕ್ರಮದ ಸಿದ್ದತೆಯೂ ಭರದಿಂದ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಟಿ. ಶಿವಕುಮಾರ ನಾಗರ ನವಿಲೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ರು. ಪತ್ರಿಕಾಗೋಷ್ಠಿಯಲ್ಲಿ ನಟಿ ಪ್ರೇಮ, ನಟ ವಸಿಷ್ಠ ಸಿಂಹ ಹಾಗೂ ಇತರರು ಪಾಲ್ಗೊಂಡಿದ್ರು.

ನವೆಂಬರ್ 19ರಂದು ದುಬೈನಲ್ಲಿ ನಡೆಯುವ ‘ವಿಶ್ವ ಕನ್ನಡ ಹಬ್ಬ’ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜರಾದ ಯಧುವೀರ ಚಾಮರಾಜ ಒಡೆಯರ್, ನಟ ಶಿವರಾಜ್ ಕುಮಾರ್, ಮಹರ್ಷಿ ಡಾ.ಆನಂದ್ ಗುರೂಜಿ, ನಟಿಯರಾದ ಭವ್ಯ, ಸುಧಾರಾಣಿ, ಶೃತಿ, ಪ್ರೇಮಾ, ಮೇಘ ಶೆಟ್ಟಿ ವಿಜಯ ರಾಘವೇಂದ್ರ ಹಾಗೂ ಮುಖ್ಯ ಅತಿಥಿಯಾಗಿ ನಟ ವಸಿಷ್ಠ ಸಿಂಹ ಪಾಲ್ಗೊಳ್ಳುತ್ತಿದ್ದಾರೆ.

ನಟ ವಸಿಷ್ಠ ಸಿಂಹ ಮಾತನಾಡಿ ನಾವೆಲ್ಲರೂ ಕನ್ನಡ ಬೆಳೆಯಬೇಕು, ಕನ್ನಡ ಬಳಸಬೇಕು ಎಂದು ಹೇಳುತ್ತೇವೆ. ಆದ್ರೆ ಅದಕ್ಕಾಗಿ ಹಲವಾರು ಜೀವಗಳು ನಿರಂತರವಾಗಿ ದುಡಿಯುತ್ತಿವೆ‌ ಹಾಗೂ ದುಡಿದಿದ್ದಾರೆ. ಅವರನ್ನೆಲ್ಲ ಗುರುತಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೌರವ ನೀಡುತ್ತಿದೆ. ಈ ಕನ್ನಡ ಹಬ್ಬಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತರಾಷ್ಟ್ರೀಯ ರಾಯಭಾರಿಯಾಗಿ ನನ್ನನ್ನು ಭಾಗವಹಿಸಬೇಕು ಎಂದು ಹೇಳಿದಾಗ ತುಂಬಾ ಹಿರಿಮೆ ಅನಿಸಿತು. ಈ ರೀತಿಯ ಕಾರ್ಯಕ್ರಮದಿಂದ ವಿಚಾರಗಳ ವಿನಿಮಯ ಆಗುತ್ತೆ. ಈ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತೆ ಎಂದು ನಂಬಿದ್ದೇನೆ. ಎಲ್ಲರೂ ನವೆಂಬರ್ ಒನ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗೋಣ ಎಂದು ನಟ ವಸಿಷ್ಠ ಸಿಂಹ ತಿಳಿಸಿದ್ರು.

ದುಬೈನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರೋದು ತುಂಬಾ ಖುಷಿಯ ವಿಚಾರ. ಹಲವು ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಶಿವಕುಮಾರ್ ಅವರಿಗೆ ಧನ್ಯವಾದ ಎಂದು ನಟಿ ಪ್ರೇಮ ತಿಳಿಸಿದ್ರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇರುವ ಬೇರೆ ಬೇರೆ ಕಲೆಯ ಆಯ್ದ ಕಲಾವಿದರನ್ನು ದುಬೈಗೆ ಕರೆದುಕೊಂಡು ಹೋಗಿ ನಮ್ಮ ಕಲೆಯನ್ನು ಅಲ್ಲಿ ಪರಿಚಯಿಸುವ ಹಾಗೂ ಅವರನ್ನು ಗೌರವಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಬೆಸುಗೆಯಾಗಿದೆ. ಹಿರಿಯ ಪತ್ರಕರ್ತರಿಗೆ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ ನಾಗರ ನವಿಲೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.