ಸಮಗ್ರ ಕವನ ಸಂಕಲನ
– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ನಿಲ್ಲು ನಲ್ಲೆ ಇಲ್ಲೆ ನಲ್ಲಲ್ಲೆ
ನಿಮಿಷ ಅರ್ಧವಾದರೂ;
ಒಲ್ಲೆ ಎಂದೇಕೆ ನಡೆವೆ?
ನನ್ನುಸಿರು ಅರ್ಥವಾದರೂ
ನಿನ್ನೊಲವಿನುಸಿರೆ ಬೇಕೆಂಬ
ಸ್ವಾರ್ಥ ನನ್ನಲ್ಲಿದ್ದರೂ
ಸಾರ್ಥ ನನ್ನದೀ ಪ್ರೇಮವು
ಸಾರ್ಥಕತೆಯ ತಾಣವು!
ಹೊಂಗನಸಿನ ಮೂಟೆ ಹೊತ್ತು;
ನನಸಿನೂರಿಗೆ ಓಡಿಹೆ;
ನಿನ್ನ ಭಾರ ನನಗೆ ಹಗುರ
ಸಾಗಿಸಲು ನಿನ್ನ ಬೇಡಿಹೆ
ಹೊತ್ತುಕೊಳಲು ನಿತ್ಯ ಕರೆವೆ
ಪ್ರಣಯ ಸಿದ್ಧಿಪಡೆಯಲು
ಪ್ರೀತಿಕೊಳಲ ಪ್ರೇಮನಾದ
ಕೇಳಿಯೂ ಹಿಂಜರಿವೆಯೇಕೆ?
ಹೂನಗೆಯನೂ ಹಡೆಯಲು!
ಇದು ವಿಲಾಪ ಇದು ಪ್ರಲಾಪ
ಹೃದಯತಾಪದ ಬಿಸಿಯು;
ಒಲವಿನೂಟವನುಣಿಸು ಬೇಗ
ಕಾಯುತಿಹುದೆನ್ನ ಹಸಿವು
ಹೋಗಲು ನಿನ್ನ ಅಂತರಾಳಕೆ
ಹಗಲಿರುಳಲು ಬಯಕೆಯು
ಬೆಸುಗೆ ಸಲುಗೆ ಸುಗ್ಗಿಯೆಂದು?
ನಾ ಕುಗ್ಗಿ ಬಗ್ಗೆ ಹೋಗಿಹೆ
ಬಿಡನು ಎನ್ನ ಚಿತ್ತಯೋನಿ
ಬೇಗನಾಗು ಒಲವದಾನಿ
ಬೇಗೆ ನೀಗು ನೀ ನಿಧಾನಿ
ನಾ-ನಲ್ಲ ಇನ್ನು ಸಮಾಧಾನಿ
ನಿಲ್ಲಲೊಲ್ಲೆ ಏಕೆ?! ನಿಲ್ಲು ನಲ್ಲೆ
ನಿಮಿಷ ಅರ್ಧವಾದರೂ;
ಒಲ್ಲೆ ಎಂದು ಗೆಲ್ಲ ಬೇಡ
ನನ್ನುಸಿರು ಅರ್ಥವಾದರೂ !
ಚಿನ್ಮಯ ಎಂ ರಾವ್
2005
*******************