ಸಂಕ್ರಾಂತಿ ಸಂಭ್ರಮ ಇಮ್ಮಡಿಗೊಳಿಸಲಿದೆ ‘ಸಂಕ್ರಾಂತಿ ತಕಥೈ’ ಹಾಡು

ಹಬ್ಬ ಅಂದ್ರೆ ಸಂಭ್ರಮ..ಸಂಭ್ರಮ ಅಂದ್ಮೇಲೆ ಒಂದಿಷ್ಟು ಆತ್ಮೀಯರು ಸೇರಬೇಕು..ಎಲ್ಲರೂ ಸೇರಿದಾರೆ ಅಂದ್ರೆ ಅಲ್ಲೊಂದು ಚೆಂದದ ಹಾಡು ಇರ್ದಿದ್ರೆ ಹೇಗೆ..ಹೌದು, ಇನ್ನೇನು ಕೆಲವೇ ದಿನ ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಸಂಕ್ರಾಂತಿ ಹಬ್ಬಕ್ಕೆ ಒಂದು ಚೆಂದದ ಸಾಂಗ್ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ..ಇಂತಹ ಆಲೋಚನೆಯಲ್ಲೇ ಹಾಡೊಂಡು ಸಿದ್ಧವಾಗಿ ಬಿಡುಗಡೆಯಾಗಿದೆ. ಒಂದಿಷ್ಟು ಸಂಗೀತ ಪ್ರಿಯ ಮನಸ್ಸುಗಳು ಒಟ್ಟಿಗೆ ಸೇರಿ ಸಂಕ್ರಾಂತಿಗೆಂದು ಹೊಸ ಸಾಂಗ್ ವೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆಂದೇ ವಿಶೇಷವಾಗಿ ರಚಿಸಲಾದ ‘ಸಂಕ್ರಾಂತಿ ತಕಥೈ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬರ್ ಹಾಗೂ ತೆಲುಗಿನ ಮಾನಸ್ ನಗುಲಪಲ್ಲಿ, ಕೀರ್ತಿ ಭಟ್, ನಿಖಿಲ್ ಮಲಿಯಕ್ಕಳ್ ಹೆಜ್ಜೆ ಹಾಕಿದ್ದಾರೆ. ಖ್ಯಾತ ನಟ ಡಾ. ರಮೇಶ್ ಅರವಿಂದ್ ಸ್ಪೆಷಲ್ ಅಪಿಯರೆನ್ಸ್ ಇರುವ ಈ ಹಾಡು ಬಿಡುಗಡೆಯಾಗಿ ಸಂಕ್ರಾಂತಿ ಹಬ್ಬದ ರಂಗು ಹೆಚ್ಚಿಸಿದೆ. ರೆಡ್ ಸೀಡರ್ ಎಂಟಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ತೆಲುಗಿನ ಖ್ಯಾತ ಹಾಗೂ ಹಿರಿಯ ನೃತ್ಯ ನಿರ್ದೇಶಕಿ ಆನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ‘ಸಂಕ್ರಾಂತಿ ತಕಥೈ’ ಹಾಡು ಮೂಡಿ ಬಂದಿದೆ. ಗಾಯಕಿ ಹಾಗೂ ‘ಎದೆ ತುಂಬಿ ಹಾಡುವೆನು’ ಖ್ಯಾತಿಯ ಲಕ್ಷ್ಮೀ ಹೊಯ್ಸಳ್ ಹಾಗೂ ಶ್ರೀನಿವಾಸ್ ನಾಯಕ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಮಲಯಾಳಂ ಸಂಗೀತ ನಿರ್ದೇಶಕ ಅನೂಪ್ ಮೆನನ್ ಸಂಗೀತ ನಿರ್ದೇಶನ ಹಾಡಿಗಿದ್ದು, ಅನೂಪ್ ಮೆನನ್ ಹಾಗೂ ಲಕ್ಷ್ಮೀ ಹೊಯ್ಸಳ್ ಹಾಡಿಗೆ ದನಿಯಾಗಿದ್ದಾರೆ.

ಶರದ್ ಗುಮಾಸ್ತೆ ಅವರ ರೆಡ್ ಸೀಡರ್ ಎಂಟಟೈನ್ಮೆಂಟ್ ಬ್ಯಾನರ್ ಅಡಿ ‘ಸಂಕ್ರಾಂತಿ ಥಕಥೈ’ ಹಾಡನ್ನು ನಿರ್ಮಾಣ ಮಾಡಿದ್ದು, ಜಯ್ ಸಿರಿಕೊಂಡ ಛಾಯಾಗ್ರಹಣ, ಪ್ರಭು ಸಂಕಲನ ಹಾಡಿಗಿದೆ.

Exit mobile version