ಬಿಡುಗಡೆಯ ನಂತರ ಮಾತನಾಡಿದ ಚಿನ್ಮಯ “ಸಂಗೀತ ನಿರ್ದೇಶನದಲ್ಲಿ ಅನುಭವ ಪಡೆಯುವ ಕಾರಣದಿಂದ ನಾನು ಇಷ್ಟು ವರ್ಷ ಭಕ್ತಿಗೀತೆ ಹಾಗು ಭಾವಗೀತೆಗಳಿಗೆ ಸಂಗೀತ ನೀಡುತ್ತಿದ್ದೆ. ಆದರೆ ಈ ನಡುವೆ ಚಿತ್ರರಂಗದ ಕೆಲವರು ನಾನು ಭಕ್ತಿಗೀತೆಗಳಿಗೆ ಮಾತ್ರ ಲಾಯಕ್ಕು. ಚಿತ್ರಗೀತೆಗಳಿಗೆ ಸಂಗೀತ ನೀಡಲು ನಾಲಾಯಕ್ಕು ಎಂದು ಹಣೆ ಪಟ್ಟಿ ಕಟ್ಟಿದ್ದರು. ಬಂದ ಕೆಲವು ಚಿತ್ರಗಳ ಅವಕಾಶಗಳನ್ನೂ ಅಪಪ್ರಚಾರ ಮಾಡಿ ತಪ್ಪಿಸುತ್ತಿದ್ದರು. ಆದರೆ ಈಗ ಕಾಲ ಕೂಡಿ ಬಂದಿದೆ. ಈ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ನಾನೂ ಚಲನಚಿತ್ರಗಳಿಗೆ ಅತ್ಯುತ್ತಮ ಗುಣಮಟ್ಟದಲ್ಲಿ ಸಂಗೀತ ನೀಡಬಲ್ಲೆ ಎಂಬುದನ್ನು ಸಾಬೀತು ಪಡಿಸಿದ್ದೇನೆ. ಚಲಚಿತ್ರಕ್ಕೆ ಸಂಗೀತ ನೀಡಬೇಕೆನ್ನುವ ನನ್ನ ಬಹು ವರ್ಷಗಳ ಬಯಕೆ ಇಂದು ಈಡೇರಿದೆ. ಆದರೆ ಈ ರಂಗದಲ್ಲಿ ನೆಲೆನಿಂತು ಒಬ್ಬ ಯಶಸ್ವಿ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಸಲ್ಲಿಸಬೇಕೆನ್ನುವುದು ನನ್ನ ಮುಂದಿನ ಗುರಿ. ಚಿತ್ರಗೀತೆಗಳು ಹೇಗಿರಬೇಕೆಂಬುದಕ್ಕೆ ನನ್ನದೇ ಆದ ಸ್ಪಷ್ಟ ಪರಿಕಲ್ಪನೆಗಳಿವೆ. ಸಂಗೀತದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಸದಾ ಹೊಸತನ್ನು ಸೃಷ್ಠಿಸಬೇಕೆಂಬುದು ನನ್ನ ಹಂಬಲ.
ಅಗಮ್ಯ ಚಿತ್ರದ ನಿರ್ಮಾಪಕ ಎಲ್.ಸಿದ್ದಮಾರಯ್ಯ, ಚಿತ್ರದ ನಿರ್ದೇಶಕ ಉಮೇಶ್ ಗೌಡ, ಗೀತಸಾಹಿತಿ ಮಹೇಶ್ ಬಿ.ಕೆ, ಈ ಚಿತ್ರದಿಂದ ಚಿತ್ರರಂಗಕ್ಕೆ ನಾಯಕ ನಟರಾಗಿ ಪ್ರವೇಶ ಪಡೆಯುತ್ತಿರುವ ಭೂಗತ ಜಗತ್ತಿನ ಮಾಜಿ ದೊರೆ ದಿವಂಗತ ಎಂ.ಪಿ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್, ಯುವನಟ ವಿಹಾನ್ ಗೌಡ ಹಾಗು ಚಿತ್ರದ ನಾಯಕಿಯರಾದ ರಮಣೀತು ಚೌದ್ರಿ, ದಿಶಾ ಪೂವಯ್ಯ, ಪವಿತ್ರ ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಮಿಮಿಕ್ರಿ ಗೋಪಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಸ್ಪೆನ್ಸ್-ಹಾರಾರ್ ಶೈಲಿಯ ಕಥೆಯುಳ್ಳ ಈ ಚಿತ್ರದ ಹೆಚ್ಚಿನ ಭಾಗವನ್ನು ಸಾಗರ ಸಮೀಪದ ಕುಂಟುಗೋಡು ಗಣಪತಿ ಅವರ ಬಂಗಲೆಯಲ್ಲಿ ಚಿತ್ರಿಸಿದ್ದಾರೆ ಎಂಬುದು ಇನ್ನೊಂದು ವಿಶೇಷ.
18-1-2013