ಭಾಗ-3-ಕೊಲ್ಲೂರಿನಲ್ಲಿ ದರ್ಶನವಾಯಿತು…!
ಏಸುದಾಸ್ ಅವರ ಪಾಂಡಿತ್ಯಪೂರ್ಣ ಹಾಡುಗಾರಿಕೆಯನ್ನು ಕೇಳಿ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತದೆಡೆಗೆ ವಾಲಿದ್ದ ನಾನು ಚಿತ್ರಗೀತೆ ಹಾಗು ಶಾಸ್ತ್ರೀಯ ಸಂಗೀತ ಇವೆರಡರ ನಡುವೆ ಇದ್ದ ಗೊಂದಲದಿಂದ ಹೊರಬಂದೆ. ಇವೆರಡರ ನಡುವೆ ನನಗಿದ್ದ ದ್ವಂದ್ವವನ್ನು ಸುಲಭವಾಗಿ ಬೇಧಿಸಿಕೊಂಡು ಹಾಡುಗಾರಿಕೆಯಲ್ಲಿ ಎರಡೂ ಎಲ್ಲಿ ಹೇಗೆ ಬೇರೆ ಬೇರೆ ಆಗುತ್ತವೆ ಎಂಬ ಗಡಿರೇಖೆಯನ್ನು ಮನದೊಳಗೆ ಗುರುತಿಸಿಕೊಂಡೆ. ಇವೆರಡದ ನಡುವೆ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಯಾರು ಗುರುತಿಸಿಕೊಳ್ಳುವುದಿಲ್ಲವೊ…ಆ ಗುಟ್ಟನ್ನು ಕಂಡುಕೊಳ್ಳುವುದಿಲ್ಲವೊ…ಅವರು ಒಂದೋ ಶಾಸ್ತ್ರೀಯ ಸಂಗೀತ ಅಥವಾ ಚಿತ್ರಗೀತೆ ಇವೆರಡರಲ್ಲಿ ಒಂದನ್ನು ಮಾತ್ರ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಆದರೆ ಇವೆರಡನ್ನೂ ಗಟ್ಟಿಯಾಗಿ ಹಿಡಿದುಕೊಂಡು ಗುರಿಯನ್ನು ಮುಟ್ಟಿದ ಏಕೈಕ ಭಾರತೀಯ ಸಂಗೀತಗಾರ, ಮೊದಲಿಗ ಎಂದರೆ ಅದು ಕೆ.ಜೆ ಏಸುದಾಸ್ ಮಾತ್ರ ಎಂದು ಘಂಟಾಘೋಷವಾಗಿ ಹೇಳಬಹುದು. ಆನಂತರ ಪಿ.ಉನ್ನಿಕೃಷ್ಣನ್, ಬಾಂಬೆ ಜಯಶ್ರೀ ಹಾಗು ಅನುರಾಧ ಶ್ರೀ ರಾಮ್ ಇವರೆಲ್ಲಾ ಇದೇ ದಾರಿಯಲ್ಲಿ ಮುನ್ನಡೆದು ಎರಡರಲ್ಲೂ ಗಟ್ಟಿಗರಾದರು. ಅತ್ತ ಶಾಸ್ತ್ರೀಯ ಸಂಗೀತ ಹಾಡುತ್ತಾ ಇತ್ತ ಸ್ಟೂಡಿಯೋಕ್ಕೆ ಬಂದು ಚಿತ್ರಗೀತೆಗಳನ್ನೂ ಹಾಡಿದರು. ನಮ್ಮ ಶಾಸ್ತ್ರೀಯ ಸಂಗೀತದ ತಳಹದಿಯನ್ನು ಗಟ್ಟಿಯಾಗಿ ಸಾಧನೆ ಮಾಡಿಕೊಂಡರೆ ಜಗತ್ತಿನ ಯಾವುದೇ ಶೈಲಿಯ ಸಂಗೀತವನ್ನು ಲೀಲಾಜಾಲವಾಗಿ ಹಾಡಬಹುದೆಂಬ ಸತ್ಯ ನನಗೆ ಗೊತ್ತಾಗಿದ್ದು ಏಸುದಾಸ್ ಸಂಗೀತದಿಂದ. ಇದಕ್ಕೆ ಯಶಸ್ವಿ ಗಾಯಕರಾಗಿ ಅವರೇ ನನ್ನ ಕಣ್ ಮುಂದೆ ಸ್ಪಷ್ಟ ಉದಾಹರಣೆಯಾಗಿದ್ದರು. ಹಾಗಾಗಿ ಯಾವ ಅನುಮಾನವಿಲ್ಲದೆ ಯಾರ ಮಾತೂ ಕೇಳದೆ ಶಾಸ್ತ್ರೀಯ ಹಾಗು ಚಿತ್ರ ಸಂಗೀತ ಇವೆರಡರಲ್ಲೂ ನನ್ನ ಅಧ್ಯಯನವನ್ನು ಮುಂದುವರೆಸಿದೆ.
ಈ ದಿಶೆಯಲ್ಲಿ ನನ್ನ ಸಂಗೀತ ಸಾಧನೆ ಆರಂಭವಾದ ಸ್ವಲ್ಪದಿನದಲ್ಲೇ ಇನ್ನೊಂದು ಸಿಹಿಸುದ್ದಿ ನನ್ನ ಕಿವಿಗೆ ತಲುಪಿತು. ನನ್ನ ಅಮ್ಮನ ಚಿಕ್ಕಪ್ಪನ ಮಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಿಯ ಪ್ರಧಾನ ಅರ್ಚಕರ ಮನೆಗೆ ಮದುವೆ ಮಾಡಿ ಕೊಟ್ಟಿದ್ದರು. ಪ್ರತೀ ವರ್ಷ ಜನವರಿ ಹತ್ತರಂದು ದೇವಿಯ ಸನ್ನಿಧಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ತಪ್ಪದೇ ಬರುವ ಏಸುದಾಸ್ ಅರ್ಚಕ ಸೀತಾರಾಮ ಅಡಿಗರ ಮನೆಯಲ್ಲೇ ಉಳಿಯುತ್ತಾರೆ. ಅಷ್ಟೇ ಅಲ್ಲ ಕಳೆದ ಐವತ್ತು ವರ್ಷಗಳಿಂದ ತನ್ನ ಎಲ್ಲಾ ಕಷ್ಟ ಸುಖಗಳ ಕಾಲದಲ್ಲೂ ಏಸುದಾಸ್ ಅಡಿಗರ ಮನೆಗೆ ಬರುತ್ತಿದ್ದಾರೆ. ಆ ಕುಟುಂಬದವರೊಡನೆ ಅವರಿಗೆ ಪರಮ ಆಪ್ತ ಸಂಬಂಧವಿದೆ ಎಂದು ನನಗೆ ಗೊತ್ತಾಯಿತು. ಸಂತಸಗೊಂಡೆ. ಮನದ ಕ್ಯಾಲೆಂಡರ್ ನಲ್ಲಿ ಆ ದಿನಾಂಕವನ್ನು ಗುರುತು ಮಾಡಿಕೊಂಡೆ. ಐ ಸ್ಟಾರ್ಟೆಡ್ ಕೌಂಟಿಂಗ್ ಫಾರ್ ದಟ್ ಡೆ. ಎಣಿಕೆ ಮುಗಿಯಿತು. ನನ್ನ ಎಣಿಕೆಯನ್ನೂ ಮೀರಿ ಸಿಕ್ಕ ಸದವಕಾಶ ಅದಾಗಿತ್ತು. ಆಕಾಶಕ್ಕೆ ಏಣಿ ಹಾಕಿಯಾಗಿತ್ತು.
ಕೊಲ್ಲೂರಿನ ಚಿಕ್ಕಮ್ಮ ನನಗೆ ಚೆನ್ನಾಗಿಯೇ ಪರಿಚಯವಿದ್ದರೂ ಅವರು ಮದುವೆಯಾಗಿ ಆ ಮನೆ ಸೇರಿದ ಮೇಲೆ ಅಷ್ಟೊಂದು ಬಳಕೆಯಲ್ಲಿರಲಿಲ್ಲ. ಅವರು ನನಗೆ ಹತ್ತಿರದ ಸಂಬಂಧಿಯಾದರೂ ನನಗೆ ಸಂಬಂಧಿಸಿದ ಯಾವುದೋ ಒಂದು ಸಂಗತಿ ಅವರ ಮನೆಯಲ್ಲಿರದಿದ್ದರೆ ನಾನು ಅಲ್ಲಿಗೆ ಹೋಗುವ ಅಸಾಮಿಯೇ ಆಗಿರಲಿಲ್ಲ. ಇನ್ನು ಕೊಲ್ಲೂರು ಕ್ಷೇತ್ರಕ್ಕೆ ದರ್ಶನ ಮಾಡಿದಾಗ ತಾಯಿಯ ಒತ್ತಾಯಕ್ಕೆ ಮಣಿದು ಅವರ ಮನೆಯ ಪಾನೀಯ ಕುಡಿದು ದಣಿವಾರಿಸ್ಕೊಂಡು ಬರುತ್ತಿದ್ದೆ ಅಷ್ಟೇ. ಆದರೆ ಈಗ ಅಷ್ಟು ಮಾತ್ರಕ್ಕಲ್ಲದೆ ಇನ್ನಷ್ಟು…ಮತ್ತಷ್ಟು..ಕನಸುಗಳನ್ನು ಹೊತ್ತು ಮಹಾತ್ಮರೊಬ್ಬರನ್ನು ಸನಿಹದಿಂದ ನೋದಬೇಕು..ಸಾಧ್ಯವಾದರೆ ಕ್ಷಣಕಾಲ ಅವರ ಸೇವೆ ಮಾಡಬೇಕೆಂಬ ಬಾಯರಿಕೆಯಿಂದ ದಣಿವಾರಿಸಿಕೊಳ್ಳಲು ನನ್ನ ಧಣಿಯನ್ನು ಹುಡುಕಿಕೊಂಡು ಕೊಲ್ಲೂರಿಗೆ ಹೋಗಿದ್ದೆ.
ದೇವಾಲಯದ ಪ್ರಾಂಗಣದ ಎದುರು ಬಲ ಮೂಲೆಯಿಂದ ಅರ್ಚಕರ ಕೇರಿಗೆ ಸಾಗುವಾಗ ನನ್ನ ಹೆಜ್ಜೆಗಳು ಏಸುದಾಸ್ ಅವರ ಹೆಜ್ಜೆಗಳನ್ನು ಹುಡುಕುತ್ತಿತ್ತು. ಕೇರಿಯ ತುದಿಯ ಹಳೆಯ ಮನೆಯೊಂದರ ಎದುರು ಒಂದಷ್ಟು ಜನ ಮುಂಬಾಗಿಲಿನಲ್ಲೇ ಮುತ್ತಿಕೊಂಡಿದ್ದರು. ಕೆಲವರು ಕಾಲೊಂದನ್ನು ಬಿಟ್ಟು ಮೈತುಂಬಾ ಕ್ಯಾಮೆರಗಳನ್ನು ಸುತ್ತಿಕೊಂಡಿದ್ದರು. ಒಂದಾದ ನಂತರ ಮತ್ತೊಂದು
ನಡುಮನೆಯಲ್ಲಿ ಏಸುದಾಸ್ ಏನನ್ನೋ ಆಲೋಚಿಸುತ್ತಾ ಒಬ್ಬರೇ ಕುಳಿತಿದ್ದರು. ರೋಮಾಂಚನಗೊಂಡ ನಾನು ಸೀದಾ ಅವರ ಕಾಲೆರಗಿ ಪರಿಚಯಿಸಿಕೊಂಡೆ. ಸಂಗೀತ ಕಲಿಯುತ್ತಿದ್ದೇನೆ ಎಂಬುದನ್ನು ಕೇಳಿದ ಅವರು ಹಾಡೊಂದನ್ನು ಹೇಳಿ ಎಂದರು. ಕುವೆಂಪು ಅವರ “ಅಂತರತಮ ನೀ ಗುರು ಆತ್ಮತಮೋಹಾರಿ” ಗೀತೆಯನ್ನು ಅಮೃತವರ್ಷಿಣಿಯಲ್ಲಿ ಹಾಡಿದೆ. ಹಾಡುವಾಗ ನಾನು ಸಂಗೀತದ ಮೇರು ಶಿಖರದ ಎದುರು ಹಾಡುತ್ತಿದ್ದೇನೆ ಎಂದು ನನಗನ್ನಿಸಲೇ ಇಲ್ಲ. ಅವರು ಅಹಂಕಾರವಿಲ್ಲದೆ..ಮಾತನಾಡುವಾಗಲೂ ಅಹಮ್ ಇಲ್ಲದೇ ತನ್ನವರೆಂದು ನನ್ನೊಡನೆ ಪ್ರೇಮದಿಂದ ವರ್ತಿಸಿದಾಗ ನಮ್ಮಿಬ್ಬರ ನಡುವೆ ಸಹಜ ಸುಂದರ ಸಂವಹನವೊಂದು ಏರ್ಪಟ್ಟಿತು. ಹಾಗಾಗಿ ನಾನು ನಿರಾಳವಾಗಿ ಹಾಡು ಮುಗಿಸಿದಾಗ ಅದರ ಅರ್ಥವನ್ನು ತಿಳಿದುಕೊಂಡ ಅವರು ಅಮೃತವರ್ಷಿಣಿ ರಾಗದ ಮಹತ್ವವನ್ನು ತಿಳಿಹೇಳಿದರು. ರಾಗದ ಆರೋಹಣ ಅವರೋಹಣವನ್ನು ಹಾಡಿ ಅಕಾರ ಸಾಧನೆಯನ್ನು ಹೇಗೆ ಮಾಡಬೇಕು?
(ಮುಗಿಯಿತು)
2-1-2013