ಗಾಯಕ ಚಿನ್ಮಯ ರಾವ್ ಅವರಿಗೆ ಖ್ಯಾತ ಹಿನ್ನೆಲೆ ಗಾಯಕ ದಿ.ಎಲ್.ಎನ್ ಶಾಸ್ತ್ರಿ ಸ್ಮರಣಾರ್ಥ ಯುವಗಾಯಕ ಪ್ರಶಸ್ತಿ ಪ್ರಧಾನ

ಖ್ಯಾತ ಹಿನ್ನೆಲೆಗಾಯಕಿ ಸುಮಾ ಶಾಸ್ತ್ರಿ ಪ್ರಥಮ ವರ್ಷದ "ಯುವಗಾಯಕ" ಪ್ರಶಸ್ತಿಯನ್ನು ಚಿನ್ಮಯ ಅವರಿಗೆ ನೀಡಿ ಸನ್ಮಾನಿಸಿದರು

ಬೆಂಗಳೂರು : ಕೆಂಗೇರಿ ಉಪನಗರದ ನಾಗದೇವನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಪ್ರಖ್ಯಾತ ಹಿನ್ನೆಲೆ ಗಾಯಕ ದಿವಂಗತ ಎಲ್.ಎನ್ ಶಾಸ್ತ್ರಿ ಅವರ ಸ್ಮರಣಾರ್ಥ ಗಾಯಕ ಚಿನ್ಮಯ ರಾವ್ ಅವರಿಗೆ “ಯುವಗಾಯಕ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಚಿರಂತನ ಅಭಿವೃದ್ಧಿ ಪ್ರತಿಷ್ಠಾನ, ಸ್ವರ ಚಿಂತನ, ಮೆಹೆಕ್ ಸೋಶಿಯಲ್ ಅಂಡ್ ವೆಲ್ ಫೇರ್ ಅಸೋಸಿಯೇಷನ್ ಮತ್ತು ವಿಷನ್ ನ್ಯೂಸ್ ಸಹಯೋಗದಲ್ಲಿ ಆಯೋಜಿಸಿದ್ದ ಪಂಚತಾರೆಯರ ಸವಿನೆನಪು ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ದಿವಂಗತ ಎಲ್.ಎನ್ ಶಾಸ್ತ್ರಿ ಅವರ ಧರ್ಮಪತ್ನಿ ಹಾಗೂ ಖ್ಯಾತ ಹಿನ್ನೆಲೆಗಾಯಕಿ ಸುಮಾ ಶಾಸ್ತ್ರಿ ಪ್ರಥಮ ವರ್ಷದ “ಯುವಗಾಯಕ” ಪ್ರಶಸ್ತಿಯನ್ನು ಚಿನ್ಮಯ ಅವರಿಗೆ ನೀಡಿ ಸನ್ಮಾನಿಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಸುಮಾ ಶಾಸ್ತ್ರಿ “ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುತ್ತಾ ತಾವೂ ಸ್ವತಹ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಚಿನ್ಮಯ ರಾವ್ ಅವರಿಗೆ ಎಲ್.ಎನ್ ಶಾಸ್ತ್ರಿ ಅವರ ಸ್ಮರಣಾರ್ಥ ನೀಡುವ ಪ್ರಥಮ ವರ್ಷದ ಈ ಪ್ರಶಸ್ತಿ ಲಭಿಸಿರುವುದು ಸೂಕ್ತವಾಗಿದೆ ಹಾಗೂ ಅರ್ಹರಿಗೆ ಸನ್ಮಾನಿಸಿದಂತಾಗಿದೆ” ಎಂದರು. 
 
ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಆರ್.ಡಿ ಸತೀಶ್, ಹಿರಿಯ ಗಾಯಕ ಶಶಿಧರ್ ಕೋಟೆ, ಪಂಡಿತ್ ಗಣೇಶ್ ಕೃಷ್ಣ ಗವಾಯಿ, ಹಿರಿಯ ಪತ್ರಕರ್ತ ಸುಧೀಂದ್ರ ರಾವ್, ಅಬ್ದುಲ್ ರೆಹಮಾನ್, ಸಿದ್ಧರಾಮೇ ಗೌಡ, ವಿರೇಶ್, ಕನ್ನಡ ಪಾಷಾ ಮುಂತಾದವರು ಹಾಜರಿದ್ದರು.
Exit mobile version