ಸಾವೆಂಬುದು ಈ ಲೋಕದಲ್ಲಿ ಯಾರನ್ನು ಬಿಟ್ಟಿದೆ ಹೇಳಿ. ಸಾವು ಯಾರನ್ನೂ ಬಿಡುವುದಿಲ್ಲ. ನಾವು ನೀವೂ ಹೊರತಲ್ಲ. ಸಾಗರದ ಅಲೆ ಅಲೆಗಳಂತೆ ಈ ಜೀವದ ತೀರಕ್ಕೆ ಬಂದು ಹೋಗುವ ನಾವು ಮತ್ತೆ ಮತ್ತೆ ಬರುತ್ತೇವೆ ಹೋಗುತ್ತೇವೆ. ಎಂತಹ ವಿಜ್ನಾನಕ್ಕೂ ಸಾವನ್ನು ಗೆಲ್ಲಲಾಗಲಿಲ್ಲ. ಆದರೆ ಒಬ್ಬ ಒಳ್ಳೆಯ ಕಲಾವಿದ ಮಾತ್ರ ಸಾವನ್ನೂ ಗೆಲ್ಲ ಬಲ್ಲ ! ಅದು ಹೇಗೆನ್ನುವಿರಾ?! ತಾನು ಬಿಟ್ಟು ಹೋದ ಕಲಾಕೃತಿಗಳಿಂದ ! ಅಲೆಯಂತೆ ಬರುವಾಗ ತನ್ನ ಸಾಧನೆಯ ಚಿಪ್ಪಿನೊಳಗೆ ಅಮೂಲ್ಯವಾದ ಮುತ್ತುಗಳನ್ನಿಟ್ಟು ಅದನ್ನು ಜೀವಿಗಳ ತೀರದಲ್ಲೇ ಬಿಟ್ಟು ಹೋಗುವ ಕಲಾವಿದ ತಾನು ಬಿಟ್ಟು ಹೋದ ಕಲಾರಚನೆಗಳಿಂದಲೇ ಚಿರಕಾಲ ಜೀವಂತವಾಗಿರುತ್ತಾನೆ. ಹೀಗೆ ಇಂತಹ ಅನರ್ಘ್ಯರತ್ನಗಳೊಂದಿಗೆ ಇಂದಿಗೂ ನಮ್ಮೊಡನೆ ಜೀವಂತವಾಗಿರುವ ಕಲಾವಿದರು ಈ ನಾಡಿನಲ್ಲಿ ಸಾಕಷ್ಟಿದ್ದಾರೆ. ಅಂಥವರಲ್ಲಿ ಸುಭಾಷ್ ಹಾರೇಗೊಪ್ಪ ಎಂಬ ಅಪ್ರತಿಮ ಸುಗಮ ಸಂಗೀತಗಾರ ಕೂಡ ಒಬ್ಬರಾಗಿದ್ದರು ಎಂಬುದು ನಮ್ಮಲ್ಲಿ ಬಹಳಷ್ಟು ಮಂದಿಗೆ ಗೊತ್ತಿಲ್ಲದಿರಬಹುದು.
ಸಹಜವಾಗಿ ಮಹಾನಗರಿಗಳಲ್ಲಿರುವ ಕಲಾವಿದರು ಮಾತ್ರ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಗರ ಸಮೀಪದ ಗ್ರಾಮೀಣ ಭಾಗದಿಂದ ಬೆಳೆದು ಬಂದಿದ್ದ ಸುಭಾಷ್ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದ್ದ ಪ್ರತಿಭಾವಂತರಾಗಿದ್ದರು. ಆಗಲೇ ಬಾಳಗೀತೆಗೆ ಅಂತ್ಯ ಹಾಡುವಂತಾಯಿತು. ಮೂರು ವರ್ಷಗಳ ನಂತರ ಅವರ ಭರಪೂರ ೮೦ ಹಾಡುಗಳು ಲೋಕಾರ್ಪಣೆಯಾಗುತ್ತಿರುವುದು ಸಂತಸದ ಸಂಗತಿ. ಈ ಮೂಲಕವಾದರೂ ಸುಭಾಷ್ ಅವರ ವಿಶಿಷ್ಠ ಬಗೆಯ ರಾಗ ಸಂಯೋಜನೆ ಹಾಗು ಗಾಯನ ಶೈಲಿ ಸುಗಮ ಸಂಗೀತ ಲೋಕಕ್ಕೆ ಅರ್ಪಿಸಲ್ಪಡುತ್ತಿರುವುದು ಬರೀ ಮನರಂಜನೆಗೆ ಮಾತ್ರವಲ್ಲದೆ ಅಧ್ಯಯನಕ್ಕೂ ಯೋಗ್ಯವಾಗಿದೆ ಎಂಬುದು ಹಲವು ಹಿರಿಯ ಸಂಗೀತಗಾರರ ಅಭಿಪ್ರಾಯ. ಅಂದ ಹಾಗೆ ಸಿ.ಡಿ ಬಿಡುಗಡೆಯ ನಂತರ ಇದೇ ಕಾರ್ಯಕ್ರಮದಲ್ಲಿ ಸುಭಾಷ್ ಅವರ ಹಾಡುಗಳನ್ನು ಅವರ ಸಹವರ್ತಿಗಳಾದ ಗಾಯಕ ರವಿ ಮೂರೂರು ಹಾಗು ಪಂಡಿತ್ ನಾಗಭೂಷಣ ಹೆಗಡೆ ಇವರುಗಳು ಹಾಡಲಿದ್ದಾರೆ. ನೀವೂ ತಪ್ಪದೆ ಬನ್ನಿ…
ಸುಭಾಷ್ ಹಾರೆಗೊಪ್ಪ-ಕಿರುಪರಿಚಯ
-ಚಿನ್ಮಯ ಎಂ.ರಾವ್ ಹೊನಗೋಡು
19-4-2013