ಶ್ರೀಧರ ತೀರ್ಥ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ನಿತ್ಯ ಆಕರ್ಷಿಸುತ್ತಿದೆ

-ಲೇಖನ ಮತ್ತು ಫೋಟೋ-ಎನ್.ಡಿ.ಹೆಗಡೆ ಆನಂದಪುರಂ

ಸಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರದಿಂದ ಶ್ರೀಕ್ಷೇತ್ರ ಸಿಗಂದೂರನ್ನು ಸಂಪರ್ಕಿಸುವ ಮಾರ್ಗದಲ್ಲಿ ಕೇವಲ ೫ ಕಿ.ಮೀ.ದೂರದಲ್ಲಿರುವ ಶ್ರೀಧರ ತೀರ್ಥ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ನಿತ್ಯ ಆಕರ್ಷಿಸುತ್ತಿದೆ.

ಹೊಸೂರು ಸಮೀಪ ಇರುವ ಈ ತೀರ್ಥ ಹೆದ್ದಾರಿಗೆ ತಾಗಿಕೊಂಡೇ ಇದೆ. ಬಹಳ ವರ್ಷಗಳ ಹಿಂದೆ ಈ ಸ್ಥಳ ಸಾಮಾನ್ಯ ಸ್ಥಳವಾಗಿ ಎತ್ತರದ ದಿಬ್ಬದಿಂದ ಕೂಡಿತ್ತು. ಈಗ ಸುಮಾರು ೬೪ ವರ್ಷಗಳ ಹಿಂದೆ ಅಂದರೆ ೧೯೪೯ ರಲ್ಲಿ ಈ ಸ್ಥಳದಲ್ಲಿ ನೀರು ಚಿಮ್ಮಲು ಆರಂಭಿಸಿತು. ರಸ್ತೆಯ ಮಟ್ಟಕ್ಕಿಂತ ಎತ್ತರದಿಂದ ಚಿಮ್ಮುವ ಈ ನೀರಿನ ಒರತೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿತ್ತು. ರಸ್ತೆಯ ಚರಂಡಿಯ ಮೇಲ್ಬಾಗದಲ್ಲಿ ಹಲವು ದಿನಗಳ ಕಾಲ ಒದ್ದೆಯಾದ ಮಣ್ಣಿನ ಸ್ಥಿತಿ ಉಂಟಾಗಿ ನಂತರ ಹೆಬ್ಬರಳು ಗಾತ್ರದ ನೀರು ಜಿನುಗಲಾರಂಭಿಸಿತು.

ನೀರು ಚಿಮ್ಮಿ ಚರಂಡಿ ಮೂಲಕ ಹರಿಯಲಾರಂಭಿಸಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿತು. ಇದೊಂದು ಪವಾಡವೆಂದು ಜನರೆಲ್ಲ ಮಾತಾಡಿಕೊಳ್ಳಲಾರಂಭಿಸಿದರು.ಹೊಸೂರಿನ ಸ್ಥಳೀಯರೆಲ್ಲ ಸೇರಿ ಈ ಸ್ಥಳದಲ್ಲಿ ಸಣ್ಣ ಗೋಪುರ ಕಟ್ಟಿಸಿ ಒಳಗಡೆ ಭಗವಾನ್ ಶ್ರೀಧರ ಸ್ವಾಮಿಗಳ ಭಾವಚಿತ್ರವನ್ನಿಟ್ಟು ಇದಕ್ಕೆ ಶ್ರೀಧರ ತೀರ್ಥ ಎಂದು ಹೆಸರಿಟ್ಟರು. ಈ ಗೋಪುರದ ಬಲಭಾಗದಲ್ಲಿ ಒಂದು ಚಿಕ್ಕ ಕೊಳ ನಿರ್ಮಿಸಿ ಯತ್ರಾರ್ಥಿಗಳು ಮತ್ತು ಪ್ರವಾಸಿಗರು ತೀರ್ಥದಂತೆ ಬಳಸಲು ವ್ಯವಸ್ಥೆ ಕಲ್ಪಿಸಿದರು.

ಇಲ್ಲಿ ವರ್ಷವಿಡೀ ನೀರು ಹರಿಯುತ್ತಿರುತ್ತದೆ. ಎಂತಹ ಕಡು ಬೇಸಿಗೆಯಲ್ಲೂ ನೀರು ಬತ್ತದೆ ಸದಾ ಚಿಮ್ಮುತ್ತಿರುವದು ಗಮನಾರ್ಹವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಸಲ ಮಹಾ ಪೂಜೆ ನಡೆಸಲಾಗುತ್ತದೆ. ಆ ದಿನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸಹ ನಡೆಯುತ್ತದೆ. ಈ ಮಾರ್ಗದ ಮೂಲಕ ಸಿಗಂದೂರಿಗೆ ತೆರಳುವ ಯಾತ್ರಿಕರು ಈ ತೀರ್ಥದ ನೀರನ್ನು ತೆಗೆದುಕೊಂಡು ಹೋಗುತ್ತಾರೆ.

ಇಲ್ಲಿರುವ ಶ್ರೀಧರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರೆ, ಮನಸ್ಸಿನಲ್ಲಿರುವ ಸಂಕಷ್ಟಗಳನ್ನು ಭಕ್ತಿಯಿಂದ ನಿವೇದಿಸಿಕೊಂಡರೆ ದುಃಖ ದೂರವಾಗಿ ಶಾಂತಿ ಲಭಿಸುತ್ತದೆ ಎಂದು ಹಲವು ಯಾತ್ರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅದಕ್ಕಾಗಿ ಒಮ್ಮೆ ಭೇಟಿಯಾದವರು ಪದೆ ಪದೇ ಭೇಟಿ ಮಾಡಿ ಶ್ರೀಗಳ ದರ್ಶನ ಪಡೆದು, ತೀರ್ಥ ಸೇವಿಸಿ ಸಂತಸದಿಂದ ಸಾಗುತ್ತಾರೆ.

-ಲೇಖನ ಮತ್ತು ಫೋಟೋ-ಎನ್.ಡಿ.ಹೆಗಡೆ ಆನಂದಪುರಂ
೨೮-೧-೨೦೧೪ 

Exit mobile version