ಅನಾಥ ಮಕ್ಕಳು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಕಥಾಹಂದರ ಹೊಂದಿರುವ ಸರ್ವಸ್ಯ ನಾಟ್ಯಂ ಚಿತ್ರ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಡಿಎಂಕೆ ಆಡ್ ಜೋನ್ ಅಡಿಯಲ್ಲಿ ಮನೋಜ್ ವರ್ಮ ನಿರ್ಮಿಸಿರುವ, ಈ ಚಿತ್ರಕ್ಕೆ ಮಂಜುನಾಥ್ ಬಿ.ಎನ್.(ವಿಜಯನಗರ ಮಂಜು) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನೂರಾರು ಮಕ್ಕಳ ಜೊತೆ ಬಿಗ್ಬಾಸ್ ಖ್ಯಾತಿಯ ರಿಷಿ ಕುಮಾರ ಸ್ವಾಮೀಜಿ ಅವರೂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಎಂ.ಬಿ. ಹಳ್ಳಿಕಟ್ಟಿ ಅವರ ಛಾಯಾಗ್ರಹಣವಿದ್ದು, ೬ ಹಾಡುಗಳಿಗೆ ಎ.ಟಿ. ರವೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೌಂದರರಾಜನ್ ಅವರ ಸಂಕಲನ, ಹರ್ಷ ಚಲುವರಾಜ್ ಅವರ ಸಂಭಾಷಣೆ, ಎಂ.ಬಿ. ಲೋಕಿ ಅವರ ಸಾಹಿತ್ಯವಿದೆ.
ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ನಡುವಿನ ಪೈಪೋಟಿಯ ಮೇಲೆ ಈ ಚಿತ್ರದ ಕಥೆ ನಡೆಯುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ಕಾಳೀಮಠದ ಶ್ರೀ ರಿಶಿಕುಮಾರ ಸ್ವಾಮೀಜಿ ಅವರು ಕಾಣಿಸಿಕೊಂಡಿದ್ದು, ಸುಮಾರು ನೂರೈವತ್ತಕ್ಕು ಅಧಿಕ ಮಕ್ಕಳು ಚಿತ್ರದಲ್ಲಿ ನಟಿಸಿದ್ದಾರೆ. ಶಮ್ಯ ಗುಬ್ಬಿ, ಬೇಬಿ ಸ್ಪೂರ್ತಿ, ಮಹೇಶರಾಜ್, ಮಾ.ಸುಶೀಲ್, ಹರ್ಷ, ಯುಕ್ತ, ವೆಂಕಟೇಶ್, ಮನೋಜ್ ವರ್ಮ, ಹೇಮ, ಅಂಜು, ಶ್ರದ್ದ, ಹರ್ಷ ಚಲುವರಾಜ್ ಮುಂತಾದವರು ನಟಿಸಿದ್ದಾರೆ.