‘ಸದ್ದು ವಿಚಾರಣೆ ನಡೆಯುತ್ತಿದೆ’ ಟ್ರೇಲರ್ ರಿಲೀಸ್ – ನವೆಂಬರ್ 25ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ

ಭಾಸ್ಕರ್ ಆರ್ ನೀನಾಸಂ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ನವೆಂಬರ್ 25ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಡುಗಳ ಮೂಲಕ ಗಮನ ಸೆಳೆದ ಚಿತ್ರತಂಡ ಇದೀಗ ಪ್ರಾಮಿಸಿಂಗ್ ಟ್ರೇಲರ್ ಬಿಡುಗಡೆ ಮಾಡಿ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.

ನೈಜ ಘಟನೆ ಆಧರಿಸಿ ಹೆಣೆದ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ‘ಸದ್ದು ವಿಚಾರಣೆ ನಡೆಯುತ್ತಿದೆ’. ಚಿತ್ರಕ್ಕೆ ಕಥೆ ಬರೆದು ಭಾಸ್ಕರ್ ಆರ್ ನೀನಾಸಂ ನಿರ್ದೇಶನ ಮಾಡಿದ್ದಾರೆ. ರಾಕೇಶ್ ಮಯ್ಯ, ಪಾವನ ಗೌಡ ನಾಯಕ ನಾಯಕಿಯಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಮಧುನಂದನ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಾಹಂಗೀರ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

ಹಿರಿಯ ನಟ ಅಚ್ಯುತ್ ಕುಮಾರ್ ಮಾತನಾಡಿ ಭಾಸ್ಕರ್ ನಟನೆ ಮಾಡ್ತಾನೆ ಅಂತ ಗೊತ್ತಿತ್ತು, ನಿರ್ದೇಶನ ಮಾಡುತ್ತಾನೆ ಎಂದು ಗೊತ್ತಿರಲಿಲ್ಲ. ನನ್ನ ನಾಟಕಗಳಲ್ಲಿ ಭಾಸ್ಕರ್ ಅಭಿನಯಿಸಿದ್ದಾನೆ. ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾನೆ. ಈ ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪಾತ್ರ ಎಂದು ಹೇಳಿದಾಗ ನಾನು ಮಾಡೋದಿಲ್ಲ ಚಿತ್ರದಲ್ಲಿರೋ ಕೋಳಿ ಕಳ್ಳರ ಪಾತ್ರ ಕೊಡು ತುಂಬಾ ಇಂಟ್ರಸ್ಟಿಂಗ್ ಆಗಿದೆ ಎಂದೆ ಆದ್ರೆ ಇನ್ಸ್ ಪೆಕ್ಟರ್ ಪಾತ್ರವನ್ನು ನೀವೇ ಮಾಡಬೇಕು ಎಂದು ಹೇಳಿದ್ರಿಂದ ಇನ್ಸ್ ಪೆಕ್ಟರ್ ಪಾತ್ರ ನಿರ್ವಹಿಸಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಮಧುನಂಧನ್ ಚಿತ್ರವನ್ನು ನಿರ್ಮಾಣ ಮಾಡೋದ್ರ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ನಟನೆಯಲ್ಲಿ ಅವರಿಗೆ ತುಂಬಾ ಪ್ಯಾಶನ್ ಇದೆ‌. ಇನ್ನೊಂದಿಷ್ಟು ತಯಾರಿ ಮಾಡಿಕೊಂಡ್ರೆ ಒಳ್ಳೆ ಭವಿಷ್ಯ ಇದೆ. ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಹರಸಿ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡ್ರು ಅಚ್ಯುತ್ ಕುಮಾರ್.

ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಕಾಂತ ಕ್ಯಾಮೆರಾ ನಿರ್ದೇಶನ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಪಿ ಸಂಕಲನ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ನವೆಂಬರ್ 25ಕ್ಕೆ ಬಿಡುಗೆಯಾಗುತ್ತಿದೆ.

Exit mobile version