ಪ್ರಮೋದ್ ನಟನೆಯ ‘ಬಾಂಡ್ ರವಿ’ ಟೀಸರ್ ರಿಲೀಸ್ – ಉಡಾಳ್ ಬಾಬು ಹೊಸ ಅವತಾರಕ್ಕೆ ಮೆಚ್ಚುಗೆಯ ಮಹಾಪೂರ

ಸ್ಯಾಂಡಲ್ ವುಡ್ ಅಂಗಳದ ಯುವ ಹಾಗೂ ಪ್ರತಿಭಾನ್ವಿತ ನಾಯಕ ನಟ ಪ್ರಮೋದ್. ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಸಿನಿ ಪ್ರೇಕ್ಷಕರ ಮನಸೂರೆಗೊಂಡ ಪ್ರಮೋದ್ ‘ಬಾಂಡ್ ರವಿ’ಯಾಗಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಈ ಚಿತ್ರದ ಇಂಟ್ರಸ್ಟಿಂಗ್ ಹಾಗೂ ಅಷ್ಟೇ ಖಡಕ್ ಆದ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರಮೋದ್ ಖಡಕ್ ಅಂಡ್ ಮಾಸ್ ಆಕ್ಟಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ನೋಡಿದವರು ಬಾಂಡ್ ರವಿ ಬ್ರ್ಯಾಂಡ್ ರವಿ ಆಗೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ. ಟೀಸರ್ ಪತ್ರಕರ್ತರಿಂದ ಬಿಡುಗಡೆಯಾಗಿದ್ದು ವಿಶೇಷ. ಇದಕ್ಕೆ ಕಾರಣ ನಟ ಪ್ರಮೋದ್. ನಾನು ಏನು ಆಗಿಲ್ಲದೆ ಇದ್ದಾಗಿನಿಂದಲೂ ನನ್ನನ್ನು ಸಪೋರ್ಟ್ ಮಾಡಿಕೊಂಡು ಬಂದವರು ಪತ್ರಕರ್ತರು. ಎಂಟು ವರ್ಷದಿಂದ ನನ್ನ ಪ್ರತಿ ಹೆಜ್ಜೆಯಲ್ಲಿ ಮಾಧ್ಯಮ ಹಾಗೂ ಪತ್ರಕರ್ತ ಮಿತ್ರರ ಸಪೋಟ್ ಬಹಳ ದೊಡ್ಡದು. ಆದ್ದರಿಂದ ಈ ಚಿತ್ರದ ಟೀಸರ್ ಪತ್ರಕರ್ತ ಮಿತ್ರರೇ ಬಿಡುಗಡೆ ಮಾಡಿಕೊಡಬೇಕು ಎಂದು ಪತ್ರಕರ್ತರ ಮೂಲಕ ಟೀಸರ್ ಬಿಡುಗಡೆ ಮಾಡಿಸಿದ್ದು ಬಹಳ ವಿಶೇಷವಾಗಿತ್ತು.

‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ’, ‘ಪ್ರೀಮಿಯರ್ ಪದ್ಮಿನಿ’ ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ತಮ್ಮ ವಿಶೇಷ ಅಭಿನಯದ ಮೂಲಕ ಅಪಾರ ಮನ್ನಣೆ ಗಳಿಸಿಕೊಂಡಿದ್ದಾರೆ. ‘ಬಾಂಡ್ ರವಿ’ ಸಿನಿಮಾ ಪ್ರಮೋದ್ ಗೆ ಬಿಗ್ ಬ್ರೇಕ್ ನೀಡೋದ್ರಲ್ಲಿ ಡೌಟೇ ಇಲ್ಲ ಎನ್ನುವಂತಿದೆ ಬಿಡುಗಡೆಯಾಗಿರುವ ಪ್ರಾಮಿಸಿಂಗ್ ಟೀಸರ್. ಪಂಚಿಂಗ್ ಹಾಗೂ ಮಾಸ್ ಡೈಲಾಗ್ ಗಳು ಟೀಸರ್ ನಲ್ಲಿ ಗಮನ ಸೆಳೆದಿದ್ದು ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ.

ನಟ ಪ್ರಮೋದ್ ಮಾತನಾಡಿ ನಾನು ಈ ಸಿನಿಮಾವನ್ನು ತುಂಬಾ ಮೆಚ್ಚಿ ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಮೇಲೆ ಕೆಟ್ಟ ನಂಬಿಕೆ ಇದೆ. ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ಕೂಡ ನನಗಿದೆ. ಅಷ್ಟು ಒಳ್ಳೆಯ ಕಂಟೆಂಟ್, ಕಥೆ ಸಿನಿಮಾದಲ್ಲಿದೆ. ನಾನು ಕೂಡ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ರು.

ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. ಮುಂಗಾರು ಮಳೆ ಕೂಡ ಹೀಗೆ ಆರಂಭವಾಗಿದ್ದು, ಅದು ದೊಡ್ಡ ಹಿಟ್ ಆಯ್ತು ಈ ಸಿನಿಮಾ ಕೂಡ ಹಿಟ್ ಆಗುತ್ತೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರು ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಚಿತ್ರದ ನಟಿ ಕಾಜಲ್ ಕುಂದರ್ ಮಾತನಾಡಿ ನನ್ನ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಪಾತ್ರವನ್ನು ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ತುಂಬಾ ಧನ್ಯವಾದಗಳು. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ಇದೆ. ಪ್ರಮೋದ್ ಅವರ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದ್ರು.

ಚಿತ್ರದ ನಿರ್ದೇಶಕ ಪ್ರಜ್ಚಲ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಸಿನಿಮಾ ಚೆನ್ನಾಗಿ ಮೂಡಿ ಮುಂದಿದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವ್ರು ವ್ಯಕ್ತಿಯಾಗಿ, ನಟನಾಗಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದೇವೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂದು ತಮ್ಮ ಸಿನಿಮಾ ಬಗ್ಗೆ ಮನದಾಳದ ಮಾತುಗಳನ್ನ ಹಂಚಿಕೊಂಡ್ರು.

ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ. ಚಿತ್ರರಂಗದಲ್ಲಿ ಹನ್ನೊಂದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಇರುವ ಪ್ರಜ್ವಲ್ ಎಸ್.ಪಿ. ಬಾಂಡ್ ರವಿ ಸೂತ್ರಧಾರ. ನರಸಿಂಹಮೂರ್ತಿ ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಬಾಂಡ್ ರವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಅಪ್ಪು ಅಭಿಮಾನಿಯಾಗಿ ಪ್ರಮೋದ್ ನಟಿಸಿದ್ದು ಇವರಿಗೆ ಜೋಡಿಯಾಗಿ ಕಾಜಲ್ ಕುಂದರ್ ತೆರೆ ಹಂಚಿಕೊಂಡಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಭಾಗಗಳಲ್ಲಿ ಬಾಂಡ್ ರವಿ ಚಿತ್ರೀಕರಣ ನಡೆಸಲಾಗಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

 

Exit mobile version