ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಭಾರೀ ಉತ್ತೇಜನ

ಎನ್ ಡಿ ಎ ಸರಕಾರವು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಭಾರೀ ಉತ್ತೇಜನ ನೀಡುತ್ತದೆ.

ಶಿಕ್ಷಣದ ವ್ಯಾಪ್ತಿ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಶೈಕ್ಷಣಿಕ ಸಾಲಗಳ ಮೇಲ್ವಿಚಾರಣೆಗೆ ಸಂಪೂರ್ಣವಾಗಿ ಮಾಹಿತಿ ತಂತ್ರಜ್ಞಾನ ಆಧರಿತ ಹಣಕಾಸು ಸಹಾಯ ಪ್ರಾಧಿಕಾರವನ್ನು ರಚಿಸಿದೆ. ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಕಾರ್ಯಕ್ರಮದಡಿ ಈ ಯೋಜನೆ ರೂಪಿಸಲಾಗಿದೆ. ಶೈಕ್ಷಣಿಕ ತರಬೇತಿಯ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗಾಗಿ ಪಂಡಿತ್ ಮದನ್ ಮೋಹನ್ ಮಾಳವಿಯಾ ಅಭಿಯಾನವನ್ನು ಆರಂಭಿಸಲಾಗಿದೆ.

ಅಕಾಡೆಮಿಕ್ ಜಾಲ ನಿರ್ಮಿಸಲು ‘ಗ್ಯಾನ್’ ಎಂಬ ಜಾಗತಿಕ ಜಾಲ ಸೃಷ್ಟಿಸಲಾಗಿದ್ದು, ಜಗತ್ತಿನ ಪ್ರಮುಖ ಶಿಕ್ಷಣ ಸಂಸ್ಥೆಗಳಿಂದ ಅತ್ಯುತ್ತಮ ಬೋಧಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳನ್ನು ರಜಾ ಕಾಲದಲ್ಲಿ ಆಹ್ವಾನಿಸುವ ಮೂಲಕ ದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೌಲ್ಯಯುತ ತರಬೇತಿ ನೀಡಲು ಸಾಧ್ಯವಾಗಲಿದೆ. ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು ಬೃಹತ್ ಪ್ರಮಾಣದಲ್ಲಿ ಮುಕ್ತ ಆನ್ ಲೈನ್ ಕೋರ್ಸ್ ಗಳನ್ನು ಆರಂಭಿಸಲಾಗಿದ್ದು ಈ ಯೋಜನೆಗೆ ಸ್ವಯಂ ಎಂದು ಹೆಸರಿಡಲಾಗಿದೆ. ರಾಷ್ಟ್ರೀಯ ಇ-ಗ್ರಂಥಾಲಯವನ್ನು ಆರಂಭಿಸಲಾಗಿದ್ದು ದೇಶಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯಗಳು ಮತ್ತು ಜ್ಞಾನ ಸಂಪನ್ಮೂಲಗಳು ದೊರೆಯುತ್ತಿವೆ.

ಶಾಲಾದರ್ಪಣ ಎಂಬ ಮೊಬೈಲ್ ತಂತ್ರಜ್ಞಾನವನ್ನು ಬಳಕೆಗೆ ತರಲಾಗಿದ್ದು, ಎಲ್ಲಾ ಪೋಷಕರಿಗೆ ಶಾಲೆಯ ಜೊತೆ ಸದಾ ಸಂಪರ್ಕದಲ್ಲಿರಲು ಮತ್ತು ಮಕ್ಕಳ ಬೆಳವಣಿಗೆ ಬಗ್ಗೆ ಮಾಹಿತಿ ಸಂಗ್ರಹಿಸಲು ನೆರವಾಗುತ್ತಿದೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೇರಣೆ ನೀಡಲು ದಾಖಲಾತಿ ಹೆಚ್ಚಿಸುವ ದೃಷ್ಟಿಯಿಂದ ಉಡಾನ್ ಎಂಬ ಹೊಸ ಯೋಜನೆ ಜಾರಿಗೆ ತರಲಾಗಿದೆ. ಈಶಾನ್ ವಿಕಾಸ್ ಯೋಜನೆ ಮೂಲಕ ಈಶಾನ್ಯ ರಾಜ್ಯಗಳ ಆಯ್ದ ಶಾಲೆಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಐಐಟಿ, ಎನ್ಐಟಿ, ಐಐಎಸ್ಇಆರ್ ಗಳ ಜೊತೆ ಸಂಪರ್ಕ ಸಾಧಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ವಿಷಯಗಳಲ್ಲಿ ಕೌಶಲ್ಯ ಮತ್ತು ತರಬೇತಿಯನ್ನು ನೀಡಲು ಉಸ್ತಾದ್ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ ಸಾಂಪ್ರದಾಯಿಕ ಕಲಾವಿದರು/ಕುಶಲಕರ್ಮಿಗಳ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ನೆರವು ನೀಡಲಾಗುತ್ತಿದೆ. ಅಲ್ಲದೆ ಅವರಿಗೆ ಮಾರುಕಟ್ಟೆ ಸೌಲಭ್ಯವನ್ನೂ ಸೃಷ್ಟಿಸಲಾಗುತ್ತಿದೆ.
ಕೌಶಲ್ಯ ಭಾರತ ಯೋಜನೆಗೆ ಪ್ರಧಾನ ಮಂತ್ರಿಯವರು ನೀಡುತ್ತಿರುವ ಮಹತ್ವ ರಹಸ್ಯವೇನಲ್ಲ. ನಮ್ಮ ಯುವಕರನ್ನು ಸಬಲೀಕರಿಸಲು ಸರಕಾರವು ತಕ್ಷಣವೇ ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ರಚಿಸಿದೆ. ವಿವಿಧ ಕಾರ್ಯಕ್ರಮಗಳಡಿ ಈವರೆಗೆ 78 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ. ಸ್ಕೂಲ್ ಟು ಸ್ಕಿಲ್ ಕಾರ್ಯಕ್ರಮದಡಿಯಲ್ಲಿ ತತ್ಸಮಾನವಾದ ಕೌಶಲ್ಯ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ. 1,500 ಕೋಟಿ ರೂಪಾಯಿ ನಿಧಿಯೊಂದಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ರೂಪಿಸಲಾಗಿದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಮೂರು ವರ್ಷಗಳಲ್ಲಿ 10 ಲಕ್ಷ ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಉದ್ಯೋಗ ಆಧರಿತ ತರಬೇತಿಗೆ ಹೆಚ್ಚಿನ ಅವಕಾಶ ಲಭ್ಯವಾಗುವಂತೆ ಮಾಡಲು ಅಪ್ರೈಂಟಿಸ್ ಶಿಪ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

50% ಸ್ಟೈಪೆಂಡ್ ಭರಿಸುವ ಮೂಲಕ ಸರಕಾರವು ಮುಂದಿನ 2ವರೆ ವರ್ಷಗಳಲ್ಲಿ ಒಂದು ಲಕ್ಷ ಟ್ರೈನಿಗಳಿಗೆ ನೆರವಾಗಲಿದೆ. ಸಧ್ಯ ಟ್ರೈನಿಗಳ ಸಂಖ್ಯೆ 2.9 ಲಕ್ಷವಿದ್ದು ಮುಂದಿನ ಕೆಲವು ವರ್ಷಗಳಲ್ಲಿ ಈ ಸಂಖ್ಯೆಯನ್ನು 20 ಲಕ್ಷಕ್ಕೆ ಏರಿಸಲು ಸರ್ಕಾರ ಗುರಿ ಹಾಕಿಕೊಂಡಿದೆ. ರಾಷ್ಟ್ರೀಯ ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯುವಕರಿಗೆ ರಾಷ್ಟ್ರವ್ಯಾಪಿ ಉದ್ಯೋಗ ಅರಸಲು ಅವಕಾಶ ಕಲ್ಪಿಸಿದೆ ಅಲ್ಲದೆ ಆನ್ ಲೈನ್ ಸೇವೆಗಳಿಗೆ ಏಕ ಕೇಂದ್ರವಾಗಿ ಕೆಲಸ ಮಾಡುತ್ತಿವೆ. ಈ ಕೇಂದ್ರಗಳು ಯುವಕರಿಗೆ ಕೆಲಸದ ಜೊತೆಗೆ ಸ್ವಯಂ-ಮೌಲ್ಯಮಾಪನಕ್ಕೂ ನೆರವಾಗುತ್ತಿವೆ. ಯುವಕರಿಗಾಗಿ ಸಲಹೆಗಾರರ ಜಾಲವನ್ನೂ ರೂಪಿಸಲಾಗಿದೆ.

Exit mobile version