ಹೆಜ್ಜೆ ಹೆಜ್ಜೆಗೂ ಶಿಥಿಲವಾಗಿ ಬಿದ್ದ ದೇವರ ಶಿಲಾ ಮೂರ್ತಿಗಳು, ಹೂಳು ತುಂಬಿ ಮೂಲ ರೂಪ ಕಳೆದುಕೊಂಡ ಪುಷ್ಕರಣಿಗಳು, ಅಲ್ಲಲ್ಲಿ ಗೋಚರವಾಗುವ ಹಳೆಯ ಕಟ್ಟಡಗಳ ನೆಲಗಟ್ಟಿನ ಅವಶೇಷಗಳು ,ಹಲವು ಭಗ್ನ ಶಿಲಾ ಮೂರ್ತಿಗಳು, ನೆಲಕ್ಕೆ ಉರುಳಿ ಬೀಳುತ್ತಿರುವ ಗುಡಿಗಳು ಇವು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಣ್ಣೂರಿನಲ್ಲಿರುವ ಪ್ರಾಚೀನ ಅಗ್ರಹಾರದ ಸಧ್ಯದ ದೃಶ್ಯವಾಗಿದೆ.
ಕಣ್ವತೀರ್ಥ ಪುಷ್ಕರಣಿ ಸುಂದರವಾಗಿದ್ದು ಆಳವಾಗಿದೆ. ಕಣ್ವೇಶ್ವರ ದೇವಾಲಯದ ಮುಂಭಾಗದಲ್ಲಿ ಭಗ್ನಗೊಂಡ ಕ್ಷೇತ್ರಪಾಲ ಮೂರ್ತಿ ಮತ್ತು ಪದ್ಮಸ್ತಂಭವಿದೆ. ಮುಂಭಾಗದ ಎತ್ತರದಲ್ಲಿ ವೇದಿಕೆಯಾಕಾರದ ರಚನೆಯಿದೆ.
ಮಹಾಭಾರತ ಕಾಲದಲ್ಲಿ ಜನಮೇಜಯನ ಯಜ್ಷಕ್ಕೆ ಇಲ್ಲಿನ ಅಗ್ರಹಾರದ ಬ್ರಾಹ್ಮಣರನ್ನು ಕರೆಸಲಾಗಿತ್ತು. ಇದರಿಂದ ಸರ್ಪ ಶಾಪಕ್ಕೆ ಗುರಿಯಾಗಿ ಎಲ್ಲಾ ಕುಟುಬಂಗಳೂ ನಾಶವಾದವು ಎಂದು ಪ್ರತೀತಿಯಿದೆ. ಆ ನಂತರ ಲೋಕೊದ್ಧಾರದ ಪರ್ಯಟನೆಗಾಗಿ ಇಲ್ಲಿಗೆ ಆಗಮಿಸಿದ ಕಣ್ವ ಮಹರ್ಷಿಗಳು ದೀರ್ಘ ತಪಸ್ಸನ್ನಾಚರಿಸಿ ಇಲ್ಲಿನ ಬ್ರಾಹ್ಮಣ ಕುಟುಬಂಗಳ ಪಾಪ ನಿವೃತಿ ಮಾಡಿದರು .ಅದರಿಂದಾಗಿ ಕಣ್ವರ ಊರು ಎಂಬ ಹೆಸರು ಬಂದು ಕ್ರಮೇಣ ಕಣ್ಣೂರು ಎಂದು ಹೆಸರು ಪಡೆಯಿತು ಎಂಬ ನಂಬಿಕೆಯಿದೆ.
ತ್ಯಾಗರ್ತಿ, ಗೌತಮಪುರ, ಕಣ್ಣೂರು ,ಯಲಸಿ ಮತ್ತು ಕುಪ್ಪಗಡ್ಡೆ ಇವು ಪ್ರಾಚೀನ ಕಾಲದ ಪಂಚ ಅಗ್ರಹಾರವಾಗಿತ್ತು ಎನ್ನಲಾಗಿದೆ, ಇವುಗಳಲ್ಲಿ ಕಣ್ಣೂರಿನ ಈ ಸ್ಥಳ ಅತ್ಯಂತ ವೈಭವ ಮತ್ತು ಶ್ರೀಮಂತಿಕೆಯಿಂದ ಕೂಡಿತ್ತು. ಈ ಪಂಚ ಗ್ರಾಮದವರಲ್ಲಿ ಮಾತ್ರ ವೈವಾಹಿಕ ಸಂಬಂಧಗಳು ನಡೆಯುತ್ತಿದ್ದವು. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರು ಸೋಮಪರಾಗ(ಚಂದ್ರ ಗ್ರಹಣ) ದೋಷ ನಿವೃತ್ತಿಗಾಗಿ ಈ ಸ್ಥಳದಲ್ಲಿ ಯಾಗ ಮಾಡಿಸಿದ್ದರಂತೆ. ಯಾಗದ ಫಲವಾಗಿ ಬಯಕ್ಕರಾಯನಿಗೆ ಒದಗಿದ್ದ ಮೃತ್ಯು ಸಂಧಿ ದೂರವಾಯಿತಂತೆ. ಇದರಿಂದ ಸಂತೃಪ್ತನಾಗಿ ೧೮ ರಿಂದ ೨೦ ಬ್ರಾಹ್ಮಣ ಕುಟುಂಬಗಳಿಗೆ ಇಲ್ಲಿಯೇ ನೆಲೆಯಾಗಲು ಸಾಕಷ್ಟು ಭೂಮಿಯನ್ನು ದಾನ ನೀಡಿದನಂತೆ ಮತ್ತು ಹಲವು ದೇವಾಲಯಗಳನ್ನು , ಪುಷ್ಕರಣಿಗಳನ್ನು ಕಟ್ಟಿಸಿ ತ್ರಿಕಾಲ ಪೂಜೆಗೆ ವ್ಯವಸ್ಥೆ ಕಲ್ಪಿಸಿದ ಎನ್ನಲಾಗಿದೆ.
೧೮೦೯ ರಲ್ಲಿ ಈ ಸ್ಥಳಗಳಲ್ಲಿ ದೊರೆತ ಶಾಸನ ಮತ್ತು ಕುರುಹುಗಳ ಕುರಿತು ಐತಿಹಾಸಿಕ ಅಧ್ಯಯನ ನಡೆಸಲಾಗಿದೆ. ಇಲ್ಲಿ ದೊರೆತ ಶಿಲಾ ಮೂರ್ತಿ ಮತ್ತು ದೇವಾಲಯದ ಶೈಲಿ ಹೊಯ್ಸಳ ಶೈಲಿಯಾಗಿದ್ದು ಹೊಯ್ಸಳ ಸಾಮ್ರಾಜ್ಯದ ಆಡಳಿತಕ್ಕೂ ಕೆಲ ಕಾಲ ಒಳ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿನ ಬನಶಂಕರಿ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ.
ಪ್ರಾಚೀನ ಕಾಲದಲ್ಲಿ ಕಣ್ಣೂರು ಶ್ರೀಮಂತ ಅಗ್ರಹಾರವಾಗಿತ್ತು. ಇಲ್ಲಿ ಸುಮಾರು ೨೫೦ ಕ್ಕೂ ಅಧಿಕ ಬ್ರಾಹ್ಮಣ ಕುಟುಬಂಗಳಿದ್ದು ಸುಮಾರು ೨೮೦೦ ಜನ ಸಂಖ್ಯೆ ಹೊಂದಿತ್ತು ಎನ್ನಲಾಗಿದೆ. ಶ್ರೀಕಣ್ವೇಶ್ವರ ಮತ್ತು ಶ್ರೀಬನಶಂಕರಿ ದೇವಾಲಯಕ್ಕೆ ೮೦ ಎಕರೆ ವಿಸ್ತೀರ್ಣದ ಸಾಗುವಳಿ ಜಮೀನನ್ನು ದಾನ ನೀಡಲಾಗಿತ್ತು. ಪ್ರತಿ ವರ್ಷ ೩೦೦ ಚೀಲ ಭತ್ತ ದಾನವಾಗಿ ಬರುತ್ತಿತ್ತು. ಕಾಲಾಂತರದಲ್ಲಿ ಸಾಂಕ್ರಾಮಿಕ ರೋಗ ಮತ್ತಿತರ ಕಾರಣ ಅಗ್ರಹಾರದ ಕುಟುಂಬಗಳು ನಾಶವಾದವು. ಈ ಗ್ರಾಮದಲ್ಲಿ ೫ ಅರಳೀ ಕಟ್ಟೆಗಳು, ೫೪ ಕ್ಕೂ ಅಧಿಕ ಪುರಾತನ ಬಾವಿಗಳು , ಹಲವೆಡೆ ಮನೆ ನೆಲಗಟ್ಟು ಹಾಗೂ ಮೆಟ್ಟಲಿನ ಕುರುಗಳಿದ್ದು ಆಸಕ್ತರಿಗೆ ಅಧ್ಯಯನ ಯೋಗ್ಯ ಸ್ಥಳವಾಗಿದೆ.
ಈ ಕ್ಷೇತ್ರ ಈಗ ಮುಜರಾಯಿ ಇಲಾಖೆಗೆ ಒಳ ಪಟ್ಟಿದ್ದು ಸುಮಾರು ೩೫ ವರ್ಷಗಳಿಂದ ಅರ್ಚಕರಾಗಿ ದುಡಿಯುತ್ತಿರುವ ವೆಂಕಟಾಚಲ ಭಟ್ಟರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಫೋಟೋ ಮತ್ತು ಲೇಖನ- ಎನ್.ಡಿ,ಹೆಚ್ ಆನಂದಪುರಂ
13-11-2012