ಭಾಗ-2-ಶಾರದೆಯ ವೀಣೆ ಏಸುದಾಸ್ ಕೊರಳಲ್ಲಿ ನುಡಿಯಿತಾ?!
ಒಂದು ದಿನ ಮಧ್ಯಾಹ್ನ ೨ ಗಂಟೆಗೆ ಅಂದು ಸಂಜೆ ೫-೩೦ಕ್ಕೆ ಶ್ರೀಕ್ಷೇತ್ರ ಶೃಂಗೇರಿಯಲ್ಲಿ ಏಸುದಾಸ್ ಅವರ ಸಂಗೀತ ಕಛೇರಿಯಿದೆ ಎಂದು ದಿನಪತ್ರಿಕೆ ಓದಿದಾಗ ಗೊತ್ತಾಯಿತು. ಇನ್ನು ಇಂಥಹ ಅವಕಾಶ ಸಿಗಲಾರದೆಂದು ಕೂಡಲೆ ಗೆಳೆಯ ವಿಕ್ಕಿಗೆ ಉತ್ಸಾಹ ತುಂಬಿ ಅವನ ಎನ್ ಫೀಲ್ಡ್ ಬೈಕಿಗೆ ಪೆಟ್ರೋಲ್ ತುಂಬಿ ಶಿವಮೊಗ್ಗದಿಂದ ಹೊರಟು ಕೇವಲ ಎರಡೇ ಗಂಟೆಯಲ್ಲಿ ಅವನೊಟ್ಟಿಗೆ ಶೃಂಗೇರಿ ತಲುಪಿಕೊಂಡೆ !
ಶೃಂಗೇರಿಯಲ್ಲಿ ಅಂದು ನವರಾತ್ರಿಯ ವೈಭವ. ಕಿಕ್ಕಿರಿದು ಸೇರಿದ ಸಭಾಂಗಣದ ತುತ್ತತುದಿಯಲ್ಲಿ ಪಾದದ ಮುಮ್ಮಡಿಯನ್ನೆತ್ತಿ ಮುಂದಿರುವ ತಲೆಗಳ ಸಂಧಿಯಿಂದ ದೂರದಲ್ಲಿ ಕಾಣುತ್ತಿದ್ದ ವೇದಿಕೆಯನ್ನು ಇಣುಕುವ ಸೌಭಾಗ್ಯ ನನ್ನದಾಯಿತು. ನೆರೆದಿದ್ದ ಜನಸಾಗರದ ನಡುವೆ ಓಡಾಡಲು ಬಿಟ್ಟ ಕಿರುದಾರಿಯಲ್ಲಿ ಬಿಳಿ ಪಂಚೆ, ಬಿಳಿ ಜುಬ್ಬ ತೊಟ್ಟ..ದಟ್ಟವಾಗಿ ಗಡ್ಡವನ್ನು ಬಿಟ್ಟ ವ್ಯಕ್ತಿಯೊಬ್ಬ ತಂಬೂರಿ ಹಿಡಿದು ವೇದಿಕೆಯತ್ತ ಸಾಗುತ್ತಿದ್ದರು. ಅವರನ್ನು ನೋಡಿ ಕೆಲವರು ಸಿಳ್ಳೆ ಹೊಡೆದರೆ ಕೆಲವರು ಚಪ್ಪಾಳೆ ತಟ್ಟಿದರು. ಸೀದಾ ಮುಂದಾದ ಆ ವ್ಯಕ್ತಿ ಕಛೇರಿಗೆ ಸಿದ್ದವಾಗಿದ್ದ ವೇದಿಕೆಯ ಒಂದು ಮೂಲೆಯಲ್ಲಿ ಹೋಗಿ ಸಿದ್ಧತೆಯಲ್ಲಿ ತೊಡಗಿದಾಗಲೇ ಗೊತ್ತಾಗಿದ್ದು ಆತ ಏಸುದಾಸ್ ಅವರ ಸಹಾಯಕ ಎಂದು ! ವೇದಿಕೆಯ ಹಿಂಬದಿಯಿಂದ ಗಡ್ಡ ಸವರುತ್ತಾ ಇನ್ನೊಬ್ಬ ಇದೇ ರೀತಿಯ ವ್ಯಕ್ತಿ ಬಂದಾಗಲೂ ಅವರೇ ಏಸುದಾಸ್ ಎಂದು ನಂಬಿ ಕೆಲವರು ಮೋಸಹೋದರು. ಹೀಗೆ ಎರಡು ಬಾರಿ ಒಂದಷ್ಟು ಚಪ್ಪಾಳೆ-ಸಿಳ್ಳೆಗಳು ವ್ಯರ್ಥವಾದವು. ಆನಂತರ ನಿಜವಾಗಿಯೂ ಏಸುದಾಸ ಬಂದಾಗ ಅವರನ್ನು ಈ ಮೊದಲು ನೋಡಿದವರು ನೋಡದವರು ಎಲ್ಲಾ ಸೇರಿ ಚಪ್ಪಾಳೆಯ ಸುರಿಮಳೆಗೈದರು.
ಧೃಢವಾಗಿ ಹೆಜ್ಜೆಗಳನ್ನಿಡುತ್ತಾ ಸ್ವಲ್ಪ ವೇಗವಾಗಿ ಮುನ್ನಡೆಯುತ್ತಿದ್ದ ಅವರನ್ನೇ ಕಣ್ ತುಂಬ ನೋಡಿದ ನನ್ನ ಕಂಗಳು ಅಷ್ಟು ವರ್ಷಗಳಿಂದ ಅಂತರಂಗದಲ್ಲಿ ಅದುಮಿಟ್ಟುಕೊಂಡಿದ್ದ ಅಸಾಮಾನ್ಯ ಅಭಿಮಾನವನ್ನು ಆನಂದಭಾಷ್ಪವಾಗಿ ಒಮ್ಮೆಲೇ ಹೊರಹಾಕಿಬಿಟ್ಟಿತು. ಬೇರೆಯವರಂತೆ ಆತುರದಿಂದ ಕಛೇರಿಯನ್ನು ಆರಂಭಿಸದೆ ಸುತ್ತಲೂ ಆವರಿಸಿಕೊಂಡಿದ್ದ ತಂಬೂರಿಯ ನಾದಕ್ಕೆ ಷಡ್ಜ,ಪಂಚಮಗಳನ್ನು ಮಾತ್ರ ದೀರ್ಘ ಉಸಿರಿನಲ್ಲಿ ಶೃತಿಗೆ ಸೇರಿಸಿಕೊಂಡು ನಾಲ್ಕೈದು ನಿಮಿಷ ಏಸುದಾಸ್ ಧ್ಯಾನಸ್ಥರಾಗಿ ಹಾಡಿದಾಗ ತುಂಬಿದ ಸಭೆಯಲ್ಲಿ ಮೌನ ತುಂಬಿಕೊಂಡಿತು. ಅಂದು ಸಂಜೆ ಆಗಸದಲ್ಲಿ ಮೋಡವೇ ಇರಲಿಲ್ಲ. ಆದರೂ ಗಂಧರ್ವಗಾಯನವನ್ನು ಕೇಳಲೋ ಏನೋ ದಿಢೀರನೆ ಕವಿದ ಮೇಘಮಾಲೆ ತುಂತುರು ಹನಿಗಳಾಗಿ ಏಸುದಾಸ್ ಹಾಡಲು ಆರಂಭಿಸಿದ “ವಾತಾಪಿ ಗಣಪತಿಮ್” ಕೃತಿಯ ತಾಳಕ್ಕೆ ಜೊತೆ ಸೇರಿ ಚಿಟಪಟ ಸದ್ದುಮಾಡಲು ಪ್ರಾರಂಭಿಸಿತು. ಇದೇ ಕೃತಿಯನ್ನು ಇದೇ ಗಾಯಕನ ದನಿಯನಿಯಲ್ಲಿ ಈ ಹಿಂದೆ ನೂರಾರು ಬಾರಿ ಧ್ವನಿಸುರುಳಿಯಲ್ಲಿ ಕೇಳಿದ್ದರೂ ಅಂದು ಹಾಡುವ ಹುಮ್ಮಸ್ಸು ಬೇರೆಯದೇ ಆಗಿತ್ತು. ಅಂದಿನ ಮನೋಧರ್ಮಕ್ಕನುಗುಣವಾಗಿ ಏಸುದಾಸ್ “ಹಂಸಧ್ವನಿ”ಯ ಸ್ವರಗಳನ್ನು ವಿಸ್ತರಿಸುತ್ತಾ ಹೋದಂತೆ ಹೊರಗಡೆ ಜಿನುಗುತ್ತಿದ್ದ ಮಳೆಯೂ ವಿಸ್ತಾರವಾಗುತ್ತಾ ಹೋಯಿತು! ತಾರ ಷಡ್ಜದಲ್ಲಿ ನಿಂತು ಮೂರನೆಯ ಕಾಲದಲ್ಲಿ ( ಅಂದರೆ ತುಂಬಾ ವೇಗವಾಗಿ) ಕಲ್ಪನಾಸ್ವರದ ಪ್ರಸ್ತಾರವನ್ನು ವಿಸ್ತಾರವನ್ನು ಭಾವುಕರಾಗಿ ಏಸುದಾಸ ಹಾಡುತ್ತಿದ್ದಾಗ ಅವರ ಕಂಚಿನ ಕಂಠದ ಗಾನಸುಧೆ ಮುಗಿಲು ಮುಟ್ಟಿತ್ತು. ಮುಗಿಲಿನಿಂದ ಭೋರ್ಗರೆಯುತ್ತಾ ಧಾರಾಕಾರವಾಗಿ ಸುರಿಯುತ್ತಿದ್ದ ವರ್ಷಧಾರೆಯ ಅಬ್ಬರವೂ ಮುಗಿಲುಮುಟ್ಟಿತ್ತು!
ತೀವ್ರಗತಿಗೆ ಸಾಗಿದ್ದ ಸ್ವರಗಳು ಮಂದಗತಿಗೆ ಬಂದು ಗಣಪತಿಯ ಕೀರ್ತನೆಯನ್ನು ಏಸುದಾಸ್ ಹಾಡಿ ಮುಗಿಸಿದಾಗ ಮುಗಿಲು ಮಳೆಸುರಿಸುವ ತನ್ನ ಕಾಯಕವನ್ನು ಮುಗಿಸಿ ಪ್ರಕೃತಿ ಒಮ್ಮೆ ಶಾಂತವಾಯಿತು. ಸಂಗೀತ ಹಾಗು ಪ್ರಕೃತಿ ಒಂದಕ್ಕೊಂದು ಎಷ್ಟು ಬೆಸೆದುಕೊಂಡಿದೆಯೆಂಬುದು ಸಾಬೀತಾಯಿತು. ಏಸುದಾಸ್ ಗಾಯನವನ್ನು ಕಣ್ಣಾರೆ ನೋಡಬೇಕೆಂದು ಹಲವು ವರ್ಷಗಳಿಂದ ಕಾದಿದ್ದ ನನ್ನ ಮನೋಭೂಮಿ ಅಂದು ಆ ಗಾನಮೃತವನ್ನು ಕೇಳಿ ತಂಪಾಯಿತು. ಏಸುದಾಸ್ ಅವರಿಗೆ ಶೃಂಗೇರಿಯ ಆಸ್ಥಾನ ವಿದ್ವಾನ್ ಪದವಿಯನ್ನು ಪ್ರಧಾನ ಮಾಡಿ ಅಂದು ಅವರನ್ನು ಸನ್ಮಾನಿಸಲಾಯಿತು.
(ಮುಂದುವರೆಯುವುದು..)
2-1-2013