ಸೆಟ್ಟೇರಿತು ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ

‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ರಘು ನಟ ಶ್ರೀ ಜೊತೆ ‘ಜಸ್ಟ್ ಪಾಸ್’ ಕಥೆ ಹೇಳಲು ಸಜ್ಜಾಗಿದ್ದಾರೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ.

ನಿರ್ದೇಶಕ ಕೆ.ಎಂ.ರಘು ಮಾತನಾಡಿ ‘ಜಸ್ಟ್ ಪಾಸ್’ ಕಾಲೇಜ್ ಬ್ಯಾಕ್ ಡ್ರಾಪ್ ನಲ್ಲಿ ನಡಿಯೋ ಸಿನಿಮಾ. ಈಗಾಗಲೇ ಕಾಲೇಜ್ ಸಬ್ಜೆಕ್ಟ್ ಇರುವ ಹಲವಾರು ಸಿನಿಮಾಗಳು ಬಂದಿವೆ ನಾವೇನು ಹೊಸತು ಹೇಳ್ತೀವಿ ಅನ್ನೋದು ಮುಖ್ಯ. ಒಂದೇ ಲೈನ್ ನಲ್ಲಿ ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ ಈ ಚಿತ್ರದಲ್ಲಿ ಜಸ್ಟ್ ಪಾಸ್ ಆದವರಿಗಾಗಿಯೇ ಕಾಲೇಜ್ ತೆರೆಯಲಾಗಿರುತ್ತೆ. ಅವರಿಗಾಗಿಯೇ ಹಾಸ್ಟೆಲ್ ವ್ಯವಸ್ಥೆ ಕೂಡ ಇರುತ್ತೆ. ಜಸ್ಟ್ ಪಾಸ್ ಆದವರ ಮೆಂಟಾಲಿಟಿ ಬೇರೆ ಇರುತ್ತೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿರುತ್ತಾರೆ. ತುಂಬಾ ತರ್ಲೆ ಇರ್ತಾರೆ. ಅವರನ್ನು ಇಟ್ಟುಕೊಂಡು ಯಾವ ರೀತಿ ಎಜುಕೇಶನ್ ನೀಡಲಾಗುತ್ತೆ ಅನ್ನೋದನ್ನ ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್ ಜೊತೆಗೆ ಕಟ್ಟಿಕೊಡಲಾಗಿದೆ. ಕಾಲೇಜ್ ಸಬ್ಜೆಕ್ಟ್ ಎಂದಾಕ್ಷಣ ಎಷ್ಟು ಎಂಟಟೈನ್ಮೆಂಟ್ ಇರುತ್ತೋ ಅಷ್ಟೇ ಒಳ್ಳೆ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ಮೈಸೂರು, ಸಕಲೇಶಪುರ, ಮಡಿಕೇರಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಕೆ.ಎಂ.ರಘು ಮಾಹಿತಿ ಹಂಚಿಕೊಂಡ್ರು.

ನಾಯಕ ನಟ ಶ್ರೀ ಮಾತನಾಡಿ ನಿರ್ದೇಶಕರು ಸಿನಿಮಾ ಕಾನ್ಸೆಪ್ಟ್ ಬಗ್ಗೆ ಹೇಳಿದಾಗ ಇಂಟ್ರಸ್ಟಿಂಗ್ ಅನಿಸ್ತು. ಚಿತ್ರದಲ್ಲಿ ‘ಜಸ್ಟ್ ಪಾಸ್’ ಆದವರಿಗಾಗಿಯೇ ಒಂದು ಕಾಲೇಜ್ ತೆರೆಯಲಾಗಿರುತ್ತೆ. ಪ್ರಿನ್ಸಿಪಾಲ್ ಜಸ್ಟ್ ಪಾಸ್ ಆದವರಿಗಾಗಿ ಯಾಕೆ ಕಾಲೇಜ್ ತೆರೆದಿರುತ್ತಾರೆ. ಹೇಗೆ ಎಜುಕೇಶನ್ ನೀಡುತ್ತಾರೆ ಎನ್ನುವ ಸ್ಟೋರಿ ಚಿತ್ರದಲ್ಲಿದೆ. ಚಿತ್ರದಲ್ಲಿ ಅರ್ಜುನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾಯಕ ನಟನಾಗಿ ಇದು ನನ್ನ ನಾಲ್ಕನೇ ಸಿನಿಮಾ. ಬಹಳ ತರ್ಲೆ, ಚೇಷ್ಟೆ ಮಾಡುವಂತ ಕ್ಯಾರೆಕ್ಟರ್ ನನ್ನದು. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರೋ ಪಾತ್ರ. ಜಸ್ಟ್ ಪಾಸ್ ಸಿನಿಮಾ ಫಸ್ಟ್ ಕ್ಲಾಸ್ ಆಗಿ ಮಾಡಲು ಎಲ್ಲರೂ ತಯಾರಾಗಿದ್ದೇವೆ ಎಲ್ಲರ ಆಶೀರ್ವಾದ ಬೇಕು ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

ನಿರ್ಮಾಪಕ ಶಶಿಧರ್.ಕೆ.ವಿ ಮಾತನಾಡಿ ನಮ್ಮ ಬ್ಯಾನರ್ ಆರಂಭ ಮಾಡಿ ಒಳ್ಳೆ ಸ್ಟೋರಿ ಸಿಕ್ಕರೆ ಸಿನಿಮಾ ಮಾಡೋಣ ಎಂದು ಯೋಜನೆಯಲ್ಲಿದ್ದೆವು. ಆದ್ರೆ ಅದೇ ಸಮಯದಲ್ಲಿ ಕೊರೋನ ಆರಂಭವಾಯ್ತು. ಅದಾದ ನಂತರ ಕೆ.ಎಂ.ರಘು ಪರಿಚಯ ಆಯ್ತು. ಅವರು ಮಾಡಿಕೊಂಡಿರೋ ಸಬ್ಜೆಕ್ಟ್ ಇಷ್ಟವಾಯ್ತು. ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ವಿ. ಈ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಮೋಟಿವೇಶನ್ ಎಲ್ಲವೂ ಇದೆ. ಜನವರಿ 2ರಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಗ್ಯಾರಂಟಿ ಫಸ್ಟ್ ಕ್ಲಾಸ್ ಆಗಿ ಮೂಡಿ ಬರಲಿದೆ ಎಂಬ ನಂಬಿಕೆ ಇದೆ ಎಂದು ಸಂತಸ ಹಂಚಿಕೊಂಡ್ರು.

ನಾಯಕ ನಟಿ ಪ್ರಣತಿ ಮಾತನಾಡಿ ಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನಟನೆಗೆ ನಾನು ಆಕಸ್ಮಿಕವಾಗಿ ಬಂದಿದ್ದು, ಶೃತಿ ನಾಯ್ಡು ಮೇಡಂ ನನ್ನ ಫೋಟೋ ನೋಡಿ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಿದ್ರು. ಅಲ್ಲಿಂದ ನನ್ನ ಜರ್ನಿ ಆರಂಭವಾಯ್ತು. ಕಿರುತೆರೆಯಾದ ನಂತರ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಕಿರುತೆರೆಯಲ್ಲಿ ಹೇಗೆ ಸಹಕಾರ ನೀಡಿದ್ರೋ ಅದೇ ರೀತಿ ಸಿನಿಮಾಗೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡ್ರು.

‘ಜಸ್ಟ್ ಪಾಸ್’ ಸಿನಿಮಾವನ್ನು ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಬಿಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

Exit mobile version