ಇದೇ ಶನಿವಾರ ಸಂಜೆ ಪ್ರಪ್ರಥಮ ಬಾರಿಗೆ ಹೊನಗೋಡು ಸ್ವರಮೇಧಾ ಉತ್ಸವ

ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿಯ ಹೊನಗೋಡಿನಲ್ಲಿ ಇದೇ ಶನಿವಾರ ಸಂಜೆ ಪ್ರಪ್ರಥಮ ಬಾರಿಗೆ “ಹೊನಗೋಡು ಸ್ವರಮೇಧಾ ಉತ್ಸವ” ಆಯೋಜನೆಗೊಂಡಿದೆ. ಸ್ವರಮೇಧಾ ಸಂಸ್ಥೆಯಿಂದ ನಡೆಯುತ್ತಿರುವ ಈ ಸಂಗೀತೋತ್ಸವಕ್ಕೆ ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ಗಾಯಕ ಗುಡ್ಡಪ್ಪ ಜೋಗಿ ಅವರು ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ವರಮೇಧಾ ಸಂಗೀತ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನೂತನವಾಗಿ ನಿರ್ಮಾಣಗೊಂಡಿರುವ “ಸ್ವರಮೇಧಾ ವಿಶ್ವಸಂಗೀತ ಸಭಾಂಗಣಮ್” ಎಂಬ ಹೆಸರಿನ ಹೊರಾಂಗಣ ವೇದಿಕೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಸಂಜೆ 4-30ಕ್ಕೆ ಆರಂಭವಾಗಲಿರುವ ಈ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿರುವ ಯುವ ಕಲಾವಿದರು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನವನ್ನು ನಡೆಸಿಕೊಡಲಿದ್ದಾರೆ. ಪಕ್ಕವಾದ್ಯದಲ್ಲಿ ಸುಶ್ರುತ ಭಾರದ್ವಾಜ್ ಅವರ ಪಿಟೀಲು ಹಾಗೂ ಶ್ರೀನಿಧಿ ಬಿ.ಜಿ ಅವರ ಮೃದಂಗ ವಾದನವಿರಲಿದೆ.

ನಂತರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹಾಲಾಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಗರದ ಪರಿಣಿತಿ ಕಲಾಕೇಂದ್ರದ ನಾಟ್ಯಾಚಾರ್ಯರಾದ ವಿದ್ವಾನ್ ಗೋಪಾಲ್ ಅವರು ಆಶಯ ಭಾಷಣವನ್ನು ಮಾಡಲಿದ್ದಾರೆ.

ಸ್ವರಮೇಧಾ ಸಂಸ್ಥೆಯ ಗೌರವ ಸಲಹೆಗಾರರಾದ ಹಿರಿಯ ಸಂಗೀತ ವಿದ್ವಾಂಸ ಹೊಸಹಳ್ಳಿ ಜಿ ಅನಂತ ಅವಧಾನಿ, ಹೊನಗೋಡು ಗ್ರಾಮಸ್ಥರಾದ ಉದ್ಯಮಿ ಮಧುಕರ ನರಸಿಂಹ ಹೆಗಡೆ, ಪ್ರಗತಿಪರ ಕೃಷಿಕ ಎಸ್ ಮೃತ್ಯುಂಜಯ ರಾವ್, ಸ್ವರಮೇಧಾ ಸಂಸ್ಥಾಪಕ, ವಿಶ್ವದಾಖಲೆ ವಿಜೇತ ಯುವ ಸಂಗೀತ ನಿರ್ದೇಶಕ, ಗಾಯಕ ಡಾ. ಚಿನ್ಮಯ ಎಂ.ರಾವ್, ಸ್ವರಮೇಧಾ ಸಂಸ್ಥೆಯ ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿರಲಿದ್ದಾರೆ.

ಕಡೆಯದಾಗಿ ಮೂರು ಗಂಟೆಗಳ ಕಾಲ ಪ್ರಮುಖ ಆಕರ್ಷಣೆಯಾಗಿ ಪ್ರಖ್ಯಾತ ಹರಿಕಥಾ ಕಲಾವಿದರಾದ ಹಡಿನಬಾಳಿನ ಹಿರಿಯ ಹರಿದಾಸರಾದ ವಿದ್ವಾನ್ ಗಣಪತಿ ಹೆಗಡೆ ಇವರಿಂದ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳವರ ಶ್ರೀ ಶ್ರೀಧರ ಗುರುಚರಿತ್ರೆಯ ಹರಿಕಥಾ ಕಾರ್ಯಕ್ರಮ ನಡೆಯಲಿದೆ. ಸಂವಾದಿನಿಯಲ್ಲಿ ಅರುಣ್ ಭಟ್ ಮೂರೂರು ಹಾಗೂ ತಬಲಾದಲ್ಲಿ ಗಜಾನನ ಯಾಜಿ ಮಣ್ಣಿಗೆ ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ.

ಸ್ವರಮೇಧಾ ಸಂಸ್ಥಾಪಕ ಡಾ. ಚಿನ್ಮಯ ಎಂ.ರಾವ್ ಅವರ ಪರಿಕಲ್ಪನೆಯಂತೆಹೊನಗೋಡು ಸ್ವರಮೇಧಾ ಉತ್ಸವ” :

ಸಂಗೀತವೆಂದರೆ ಪ್ರಕೃತಿ. ಪ್ರಕೃತಿಯಲ್ಲೇ ಸಂಗೀತವಿದೆ. ಪ್ರಕೃತಿಯಲ್ಲೇ ಜಾತಿ, ಧರ್ಮ, ದೇಶ, ಭಾಷೆ, ಮೇಲು ಕೀಳು, ಬಡವ ಬಲ್ಲಿದ ಎಲ್ಲವನ್ನೂ ಮೀರಿದ ಸೌಂದರ್ಯವಿದೆ. ಆ ಸೌಂದರ್ಯದಲ್ಲೇ ಆಧ್ಯಾತ್ಮವಿದೆ. ಪ್ರಕೃತಿಯಲ್ಲೇ ಸಂಗೀತ, ಸಂಗೀತದಲ್ಲೇ ಸೌಂದರ್ಯ, ಸೌಂದರ್ಯದಲ್ಲೇ ಆಧ್ಯಾತ್ಮ ಎಲ್ಲವೂ ಒಂದರೊಳಗೊಂದು ಅಡಕವಾಗಿದೆ.

ಮಲೆನಾಡಿನ ಮಡಿಲಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊನಗೋಡು ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಪ್ರಕೃತಿಯ ಸೌಂದರ್ಯದೊಳಗಿರುವ ಸಂಗೀತದ ಆಧ್ಯಾತ್ಮವಿದೆ. ಸ್ವರಮೇಧಾ ಎಂಬ ವಿಶಿಷ್ಠ ಚಿಂತನೆಯಿಂದ ಕೂಡಿದ ಸಂಗೀತದ ಪರಂಪರೆಯೊಂದು ಇಲ್ಲಿ ಜನಿಸಿರುವುದೇ ಇದಕ್ಕೆ ಬಹು ದೊಡ್ಡ ಸಾಕ್ಷಿ. ಇಂತಹ ಪ್ರಕೃತಿ, ಇಂತಹ ಸಂಗೀತ, ಇಂತಹ ಸೌಂದರ್ಯ, ಇಂತಹ ಆಧ್ಯಾತ್ಮವನ್ನು ಹೊನಗೋಡಿನಿಂದ ವಿಶ್ವದಾದ್ಯಂತ ತಲುಪಿಸುವ ಉತ್ಸವವೇ “ಹೊನಗೋಡು ಸ್ವರಮೇಧಾ ಉತ್ಸವ”.

Exit mobile version