ಸ್ವರಮೇಧಾ ಸಂಗೀತೋತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ

ಬೆಂಗಳೂರು : ಪಾಶ್ಚಾತ್ಯ ಸಂಗೀತದ ಆಕರ್ಷಣೆಗೆ ಮಾರು ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸ್ವರಮೇಧಾ ಸಂಸ್ಥೆ ಏರ್ಪಡಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವೊಂದಕ್ಕೆ ಸಾವಿರಾರು ಜನ ಸೇರಿದ್ದಾರೆ ಎಂದರೆ ಅದೊಂದು ಆಶ್ಚರ್ಯಕರ ಬೆಳವಣಿಗೆ, ಇದು ಹೀಗೆಯೇ ಮುಂದುವರೆಯಬೇಕು ಎಂದು ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

 

ಸ್ವರಮೇಧಾ ಸಂಗೀತೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡ ಕಾರಣ ಸ್ವರಮೇಧಾ ಸಂಸ್ಥಾಪಕ ಸಂಗೀತಗುರು ಡಾ.ಚಿನ್ಮಯ ರಾವ್ ಅವರಿಂದ ಗುರುವಂದನೆ ಹಾಗೂ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಯುವಕಲಾವಿದರನ್ನು ಬೆಳೆಸುತ್ತಿದೆ ಎಂದರು. ಕೆಂಗೇರಿ ಬಿಜಿಎಸ್ ಶಿಕ್ಷಣಸಂಸ್ಥೆಯಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಬಿಜಿಎಸ್ ಸಂಸ್ಥೆಯ ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Exit mobile version