ರಾಕಿ ಸೋಮ್ಲಿ ನಿರ್ದೇಶನದ ‘ಕೆಂಡದ ಸೆರಗು’ ಟೀಸರ್ ರಿಲೀಸ್

ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯ ಹಾಗೂ ಕನಸಿನ ರಾಣಿ ಮಾಲಾಶ್ರೀ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಸಿನಿಮಾ. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಟಿ ಮಾಲಾಶ್ರೀ ಮಾತನಾಡಿ ಒಂದೊಳ್ಳೆ ಸಬ್ಜೆಕ್ಟ್ ಚಿತ್ರದಲ್ಲಿದೆ. ಸಿನಿಮಾ ಕೆಲಸ ಆದ ಮೇಲೆ ಒಮ್ಮೆ ನನಗೆ ತೋರಿಸಿ ಎಂದು ಹೇಳಿದ್ದೆ ರಫ್ ಸ್ಕೆಚ್ ನೋಡಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ ಸಿನಿಮಾ. ನಾನು ಪೋಲೀಸ್ ಪಾತ್ರ ತುಂಬಾ ಮಾಡಿದ್ದೀನಿ ಆದ್ರೆ ಇಲ್ಲಿವರೆಗೆ ಮಾಡಿರುವ ಪಾತ್ರಕ್ಕಿಂತ ಡಿಫ್ರೆಂಟ್ ಫೀಲ್ ಈ ಪಾತ್ರ ನೀಡಿದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಂತಲ್ಲ ಹೆಣ್ಣುಮಗಳೊಬ್ಬಳ ನೋವಿನ ಕಥೆ ಚಿತ್ರದಲ್ಲಿದೆ. ಒಂದೊಳ್ಳೆ ಮೆಸೇಜ್ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ತುಂಬಾ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆ ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

ನಿರ್ದೇಶಕ ರಾಕಿ ಸೋಮ್ಲಿ ಮಾತನಾಡಿ ‘ಕೆಂಡದ ಸೆರಗು’ ನಾನೇ ಬರೆದ ಕಾದಂಬರಿ ಆಧಾರಿತ ಸಿನಿಮಾ. ನಿರ್ಮಾಪಕ ಕೊಟ್ರೇಶ್ ಹಾಗೂ ನಾನು ಇಬ್ಬರು ಸ್ನೇಹಿತರು. ಅವರಿಗೆ ನಾನು ಈ ಕಾದಂಬರಿ ಬಗ್ಗೆ ಹೇಳಿದಾಗ. ಸಿನಿಮಾ ಮಾಡೋಣ ಎಂದು ಹೇಳಿದ್ರು. ಭೂಮಿ ಶೆಟ್ಟಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿನಿಮಾ ಮಾಡುವಾಗ ಮಾಲಾಶ್ರೀ ಮೇಡಂ ಕೈನಲ್ಲಿ ಒಂದು ಪಾತ್ರ ಮಾಡಿಸಬೇಕು ಎಂದು ಒಂದು ಆಲೋಚನೆ ಬಂತು. ಕಥೆ ಕೇಳಿದ ಮೇಲೆ ಒಪ್ಪಿಕೊಂಡ್ರು. ಸಿನಿಮಾ ಚಿತ್ರೀಕರಣದಲ್ಲೂ ಸಪೋರ್ಟ್ ಮಾಡಿದ್ರು. ಕಮರ್ಶಿಯಲ್ ಆಗಿ ಮೂಡಿ ಬಂದಿದೆ. ಕುಸ್ತಿಗೆ ಹೆಚ್ಚು ಫೋಕಸ್ ನೀಡಲಾಗಿದೆ. ಡಬ್ಬಿಂಗ್ ಕೆಲಸ ನಡೆಯುತ್ತಿದೆ ಚಿತ್ರದಲ್ಲಿ ಆರು ಹಾಡುಗಳಿವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಾಯಕಿ ಭೂಮಿ ಶೆಟ್ಟಿ ಮಾತನಾಡಿ ಮಹಿಳೆ ಎಲ್ಲಿ ಪ್ರಧಾನವಾಗಿರುತ್ತಾಳೆ ಆ ರೀತಿಯ ಪಾತ್ರ ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೆ. ಅದೇ ಸಮಯದಲ್ಲಿ ಕೆಂಡದ ಸೆರಗು ಸಿನಿಮಾ ಸಿಕ್ತು. ಕಥೆ, ಅದರ ಸುತ್ತಮುತ್ತ ಇರುವ ಪಾತ್ರಗಳು, ಸಿನಿಮಾದಲ್ಲಿನ ಶೇಡ್ ಎಲ್ಲವನ್ನು ಕೇಳಿ ಇಷ್ಟವಾಯ್ತು. ಚಾಲೆಂಜಿಂಗ್ ಪಾತ್ರ ನಾನು ಮಾಡಲೇಬೇಕು ಎಂದು ಒಪ್ಪಿಕೊಂಡೆ. ಕುಸ್ತಿಗೆ ಹಂಡ್ರೆಡ್ ಪರ್ಸೆಂಟ್ ಗಿಂತ ಜಾಸ್ತಿ ಎಫರ್ಟ್ ಹಾಕಿದ್ದೇನೆ. ನನ್ನ ಪಾತ್ರಕ್ಕಿರುವ ಶೇಡ್ಸ್ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ ಆದ್ರೆ ಆಕೆಗೂ ಅವಕಾಶ ನೀಡಿದ್ರೆ ಏನ್ ಬೇಕಿದ್ರು ಸಾಧಿಸುತ್ತಾಳೆ ಎನ್ನುವ ಎಳೆ ಚಿತ್ರದ್ದು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಿರ್ಮಾಪಕ ಕೆ. ಕೊಟ್ರೇಶ್ ಗೌಡ ಮಾತನಾಡಿ ದಾವಣಗೆರೆಯಲ್ಲಿ ನನ್ನದೊಂದು ಬೀಡ ಅಂಗಡಿ ಇದೆ. ಸಿನಿಮಾ ಮಾಡಬೇಕು ಎಂದು ನಾನು ರಾಕಿ ಸೋಮ್ಲಿ ಮಾತನಾಡುತ್ತಿದ್ವಿ. ಪ್ರೊಡ್ಯೂಸರ್ ಗಾಗಿ ಒಂದು ವರ್ಷ ಹುಡುಕಾಟ ನಡೆಸಿದ್ವಿ ನಂತರ ನಂದೇ ಒಂದು ಸೈಟ್ ಇತ್ತು, ಬಂಗಾರ ಇತ್ತು ಅದನ್ನು ಮಾರಿ ಸಿನಿಮಾ ಮಾಡಿದ್ದೀನಿ. ರಾಕಿ ನನ್ನ ಸ್ನೇಹಿತ ಅತನಿಗೆ ಸಪೋರ್ಟ್ ಮಾಡಬೇಕು, ಜೊತೆಗೆ ಕೆಂಡದ ಸೆರಗು ಪುಸ್ತಕದಲ್ಲಿ ಕುಸ್ತಿ ಬಗ್ಗೆ ತುಂಬಾ ಡಿಟೈಲ್ ಆಗಿ ಬರೆದಿದ್ದಾರೆ. ಸಿನಿಮಾ ಮಾಡಿದ್ರೆ ಕ್ಲಿಕ್ ಆಗುತ್ತೆ ಎಂದು ಬಂಡವಾಳ ಹಾಕಿದ್ದೀನಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.

ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

Exit mobile version