ಸತತ ಎರಡನೇ ಸಲ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮೂಲಕ ಸುದ್ದಿಯಲ್ಲಿರುವ ನಟಿ ದಿವ್ಯಾ ಉರುಡುಗ. ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯಗೊಂಡವರು ದಿವ್ಯಾ. ಈಗ ಮತ್ತೆ ಈಕೆ ಅರವಿಂದ್ ಕೌಶಿಕ್ ಜೊತೆಯಾಗಿದ್ದಾರೆ. ʻ ಅರ್ದಂಬರ್ಧ ಪ್ರೇಮ ಕಥೆʼ ಎನ್ನುವ ಭಿನ್ನ ಶೀರ್ಷಿಕೆಯ ಚಿತ್ರ ಈಗಾಗಲೇ ಮುಕ್ತಾಯಗೊಂಡಿದೆ. ಆದರೆ ಈ ವರೆಗೂ ಈ ಚಿತ್ರದ ನಾಯಕ ನಟ ಯಾರು ಅಂತಾ ರಿವೀಲ್ ಮಾಡಿಲ್ಲ.
ಅರವಿಂದ್ ಕೌಶಿಕ್ ಏನೇ ಮಾಡಿದರೂ ಅದರಲ್ಲಿ ಹೊಸತನವಿರುತ್ತದೆ. ಆರಂಭದಲ್ಲಿ ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಹೆಸರು ಮಾಡಿದವರು. ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಏಕಕಾಲದಲ್ಲಿ ಕೆಲಸ ನಿರ್ವಹಿಸುತ್ತಾ, ಬಣ್ಣದ ಜಗತ್ತಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು. ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಇವತ್ತಿಗೆ ಹೆಸರು ಮಾಡಿರುವ ಸಾಕಷ್ಟು ಪ್ರತಿಭಾವಂತರು ಆರಂಭದಲ್ಲಿ ಕೆಲಸ ಮಾಡಿದ್ದು ಇದೇ ಅರವಿಂದ್ ಅವರ ಜೊತೆಗೆ. ನಮ್ ಏರಿಯಾಲ್ ಒಂದಿನ ಮೂಲಕ ಅರ್ಜುನ್ ಜನ್ಯ ಪೂರ್ಣ ಪ್ರಮಾಣದ ಸಂಗೀತ ಸಂಯೋಜಕರಾಗಿ ಕಾರ್ಯಾರಂಭ ಮಾಡಿದ್ದರು. ಈಗ ಅರ್ಜುನ್ ಕೂಡಾ ಅರ್ಜುನ್ ಜನ್ಯ ಜೊತೆಗೂಡಿದ್ದಾರೆ. ʻ ಅರ್ದಂಬರ್ಧ ಪ್ರೇಮ ಕಥೆʼಗೆ ಚೆಂದದ ಹಾಡುಗಳನ್ನು ಅರ್ಜುನ್ ಜನ್ಯ ರೂಪಿಸಿದ್ದಾರೆ.
ಬಕ್ಸಸ್ ಮೀಡಿಯಾ ʻ ಅರ್ದಂಬರ್ಧ ಪ್ರೇಮ ಕಥೆʼ ಚಿತ್ರವನ್ನು ನಿರ್ಮಿಸಿದೆ. ಲೈಟ್ ಹೌಸ್ ಮೀಡಿಯಾ ಮತ್ತು ಆರ್ ಎ ಸಿ ವಿಷುವಲ್ಸ್ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿವೆ. ಸೂರ್ಯ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸವನ್ನೂ ನಿಭಾಯಿಸಿದ್ದಾರೆ. ರ್ಯಾಪರ್ ಆಲ್ ಓಕೆ ಅಲೋಕ್ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕಿಯಾಗಿ ಹೆಸರು ಮಾಡಿರುವ ಶ್ರೇಯಾ ಬಾಬು, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಮೊದಲಾದವರ ತಾರಾಗಣ ಈ ಚಿತ್ರಕ್ಕಿದೆ. ಇದಲ್ಲದೇ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ನಟರೊಬ್ಬರು ಈ ಚಿತ್ರದಲ್ಲಿದ್ದಾರೆ. ಇಷ್ಟರಲ್ಲೇ ಅವರು ಯಾರು ಎನ್ನುವ ಮಾಹಿತಿ ಕೂಡಾ ಹೊರಬೀಳಲಿದೆ.