ವರದಪುರಕೆ ನೀವೂ ಒಮ್ಮೆ ಭೇಟಿಕೊಡಿ..ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರವಿದು..!

ಅದು ಮಲೆನಾಡಿನ ಪುಟ್ಟಹಳ್ಳಿ. ಆದರೆ ಅಲ್ಲಿ ಸದಾ ಭಕ್ತ ಸಾಗರದಿಂದ ಸಾವಿರಾರು ಜನ ಪ್ರತಿದಿನ ಒಗ್ಗೂಡುವ ತೀರ್ಥ ಕ್ಷೇತ್ರ, ಅದುವೇ ವರದಪುರ. ಸುತ್ತಮುತ್ತಲಿನ ಜನರಿಗೆ ವರದಳ್ಳಿ .(ವರದ ಹಳ್ಳಿ )

ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ ೬ ಕಿಲೋಮೀಟರ್ ದೂರದಲ್ಲಿದೆ. ಪವಾಡ ಪುರುಷರೆಂದೇ ಪ್ರಸಿದ್ಧರಾದ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರವಿದು .ಹಲವಾರು ವರ್ಷಗಳು ತಪಸ್ಸನ್ನು ಮಾಡಿ ಶ್ರೀಧರರು ಮುಕ್ತಿಹೊಂದಿದ ಸ್ಥಳವಿದು.

ಈಗ ಇಲ್ಲಿ ಅವರ ಸಮಾಧಿ ಇದೆ. ಆದರೂ ಭಕ್ತ ಜನರ ಆಗಮನಕ್ಕೆನು ಕೊರತೆ ಇಲ್ಲ . ಪ್ರತಿದಿನ ಸಾವಿರಾರು ಜನ ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡು ತಮ್ಮ ಇಷ್ಟಾರ್ಥ ನೆರವೆರಿಸಿಕೊಳ್ಳುವ ದೇಶವಿದೇಶಗಳಲ್ಲೂ ಪ್ರಸಿದ್ಧಿ ಹೊಂದಿದ ಕ್ಷೇತ್ರ.

“ಓಂ ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣಿ-ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ”
ಇದು ಶಾಂತ ಮೂರ್ತಿಯು ಸತ್ಯ ಧರ್ಮ ಸ್ವರೂಪಿಯೂ ಆದ ಶ್ರೀಧರ ಸ್ವಾಮೀಜಿಯ ಪಠಣಾ ಸ್ತೋತ್ರ .

ಶ್ರೀಧರ ಸ್ವಾಮಿಜಿಯು ದತ್ತಾತ್ರೆಯರ ಇನ್ನೊಂದು ಸ್ವರೂಪ. ದಿವ್ಯ ತೇಜಸ್ಸನ್ನು ಹೊಂದಿದ ಶಾಂತ ಸ್ವರೂಪಿ ಶ್ರೀಧರರು ಲೋಕದ ಒಳಿತಿಗಾಗಿ ಸನ್ಯಾಸತ್ವವನ್ನು ಪಡೆದು ಹಲವು ಕಾಲ ನೆಲಸಿ ಭಕ್ತ ರಿಗೆ ಮಾರ್ಗದರ್ಶನ ನೀಡಿ ಮುಕ್ತಿ ಹೊಂದಿದ ಶಾಂತ ಪ್ರದೇಶವಿದು.
ಮಲೆನಾಡ ಹಸಿರಿನ ನಡುವೆ ಇರುವ ಕಣ್ಣನ್ನು ತಂಪಾಗಿಸುವ ಆಶ್ರಮ.

ಇಲ್ಲ್ಲಿ ಒಂದು ವಿಶೇಷತೆ ಇದೆ, ಸದಾ ಕಾಲ ಗೋಮುಖದಿಂದ ತೀರ್ಥ ಹರಿದು ಬರುತ್ತಿರುತ್ತದೆ . ಈ ತೀರ್ಥವನ್ನು ತುಂಬಿ ಇಟ್ಟರೆ ಎಷ್ಟು ವರ್ಷಗಳಾದರೂ ಹಾಳಾಗದೆ ಉಳಿಯುವುದು ಖಂಡಿತ .ಇದು ಔಷಧೀಯ ಗುಣಗಳನ್ನು ಹೊಂದಿದ ಜಲ ಎಂದೇ ಪ್ರಸಿದ್ಧಿ ಪಡೆದಿದೆ.ಈ ತೀರ್ಥ ದಿಂದ ಸ್ನಾನ ಮಾಡಿದಲ್ಲಿ ಎಂತಹ ಕಾಯಿಲೆ ಇದ್ದರೂ ಕೂಡ ಗುಣಮುಖ ಆಗುವುದು ಎಂಬ ನಂಬಿಕೆ ಇದೆ. ಗುಣಮುಖವಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ. ಆದ್ದರಿಂದ ಇದು ತೀರ್ಥ ಕ್ಷೇತ್ರ ಎಂದೇ ಪ್ರಸಿದ್ದಿ ಹೊಂದಿದೆ. ಇಲ್ಲಿ ಪ್ರತಿದಿನ ಅನ್ನಸಂತರ್ಪಣೆಯನ್ನು ಕೂಡ ಮಾಡಲಾಗುತ್ತದೆ.

ಇಲ್ಲಿ ಒಮ್ಮೆ ಭೇಟಿಕೊಟ್ಟರೆ ಮನಸ್ಸು ಪ್ರಶಾಂತವಾಗುತ್ತದೆ. ಮನಸ್ಸಿಗೊಂದು ಚೈತನ್ಯ ಮೂಡುತ್ತದೆ. ಹೊರ ರಾಜ್ಯ ದೇಶಗಳಿಂದ ಕೂಡ ಇಲ್ಲಿಗೆ ಪ್ರತಿದಿನ ಭಕ್ತಾದಿಗಳು ಬರುತ್ತಾರೆ. ಇದರ ಇನ್ನೊಂದು ಶಾಖೆಯು ಬೆಂಗಳೂರಿನ ವಸಂತಪುರದಲ್ಲೂ ಕೂಡ ಇದೆ ನೀವೂ ಒಮ್ಮೆ ಭೇಟಿಕೊಡಿ. ಮನಸ್ಸನ್ನು ಶಾಂತವಾಗಿಸಿಕೊಳ್ಳಿ.

ಅರ್ಪಿತಾ ಹರ್ಷ ಲಂಡನ್

Exit mobile version