ಪುಣ್ಯಕ್ಷೇತ್ರ

ವದ್ದಳ್ಳಿಯಲ್ಲಿಹಳು ಶ್ರೀ ದುರ್ಗಾಂಬಾ.. ಒಮ್ಮೆಯಾದರೂ ನೀ ದರ್ಶನ ಮಾಡಿ ಬಾ…

ಚಿನ್ಮಯ.ಎಂ.ರಾವ್ ಹೊನಗೋಡು

ಹೊಸ ಹೊಸ ಕ್ಷೇತ್ರಗಳನ್ನು ದರ್ಶನ ಮಾಡುವ ಖುಷಿಯೇ ಬೇರೆ. ದೇವರು ಸರ್ವವ್ಯಾಪಿ ನಿಜ…ಆದರೂ ಮನೆಗಿಂತ ದೇವಾಲಯಗಳಲ್ಲಿ ಸಿಗುವ ಆನಂದವೇ ಬೇರೆ. ಅದರಲ್ಲೂ ಪ್ರಕೃತಿಯ ಮಡಿಲಲ್ಲಿರುವ ದೇವಸ್ಥಾನವೊಂದು ಮನಸಾರೆ ಆದರೆ ಮನಸೂರೆ…ಪದೇ ಪದೇ ಅಲ್ಲಿಗೆ ಹೋಗೋಣವೆನಿಸುತ್ತದೆ ಇದು ಖರೇ…ನೀವು ಆಗಾಗ ದರ್ಶನ ಮಾಡಬಹುದಾದ, ಯಾವಾಗಲೂ ನಿಮ್ಮನ್ನು ಬರಸೆಳೆದು ಹರಸುವ ದೇವಿಯ ಸನ್ನಿಧಿಯೊಂದರ ಪರಿಚಯ ಇಲ್ಲಿದೆ ನಿಮಗಾಗಿ.

02-FRONT HEADINGದೇವಾಲಯ-ಪರಿಚಯ

ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವದ್ದಳ್ಳಿ (ಆಡು ಭಾಷೆಯಲ್ಲಿ) ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ.ಈ ಸ್ಥಳಕ್ಕೆ ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ. ಇಲ್ಲಿಯ ದುರ್ಗಾಂಬಾ ದೇವಿಯು ಭಗವಾನ್ ವ್ಯಾಸಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು ಐತಿಹ್ಯ ಹೊಂದಿ ಇಂದಿಗೂ ಭಕ್ತಿ-ಶಕ್ತಿಯ ಅಧಿದೇವತೆಯಾಗಿ ಭಾಕ್ತಾದಿಗಳ ಅಭೀಷ್ಠಗಳನ್ನು ನೆರವೇರಿಸುತ್ತಾ ಶ್ರೀಕ್ಷೇತ್ರದಲ್ಲಿ ನೆಲೆ ನಿಂತು ಲೋಕಪ್ರಖ್ಯಾತಳಾಗಿದ್ದಾಳೆ.

14-FROM BACK HEIGHT-2ಶ್ರೀಕ್ಷೇತ್ರ ವರದಪುರದ ಪಾವಿತ್ರ್ಯವನ್ನು ಎಷ್ಟು ವರ್ಣಿಸಿದರೂ ಶಬ್ಧಗಳು ಸೋಲುತ್ತವೆ. ಪ್ರಕೃತಿಯೇ ಸಾಕಾರ ದೇವತೆಯಾಗಿ ಇಲ್ಲಿ ಆವಿರ್ಭವಿಸಿದ್ದಾಳೆ. ಇಲ್ಲಿಯ ಮಣ್ಣಿನ ಕಣಕಣವೂ ದೈವೀಶಕ್ತಿಯ ಆವಿರ್ಭಾವವೇ ಆಗಿದೆ. ಪೌರಾಣಿಕೆ ಹಿನ್ನೆಲೆ ಇಲ್ಲಿಯ ಭೌಗೋಳಿಕ ಸಂದರ್ಭಕ್ಕೆ ಸುವರ್ಣಚೌಕಟ್ಟನ್ನು ಕಟ್ಟಿದೆ.

ಕ್ಷೇತ್ರದ ಇತಿಹಾಸ

ಮಹಿಷಾಸುರನನ್ನು ಶ್ರೀಮಾತೆಯು ಕಾಲಿನಿಂದ ವದೆದಿದ್ದರಿಂದ ಇದು “ವದ್ದಳ್ಳಿ” ಎಂದು ಗ್ರಾಮೀಣ ಸೊಬಗನ್ನು ಮೈಗೂಡಿಸಿಕೊಂಡಿದೆ. ಆ ದೇವಿಯು ಶಕ್ತಿರೂಪಿಣಿಯಾಗಿ ಇಲ್ಲಿ ಭಕ್ತಾನುಗ್ರಹಕ್ಕೆ ಕಾತರಳಾಗಿದ್ದಾಳೆ.

09-CHNDRA SAALE FROM INNER-2ಇದು ಪೌರಾಣಿಕ ಹಿನ್ನೆಲೆಯ ಜಾಗೃತ ಕ್ಷೇತ್ರವಾಗಿರುವುದರ ಜೊತೆಜೊತೆಗೆ ಗಂಗೆ-ಯಮುನೆಯರ,ತುಂಗೆ-ಭದ್ರೆಯರ ಭಾವಸಂಗಮದಂತೆ ಶ್ರೀಮಾತೆಯ ಸನ್ನಿಧಿಯ ಪಾವಿತ್ರ್ಯದೊಂದಿಗೆ,ದತ್ತ ಪರಂಪರೆಯ,ಶ್ರೀ ರಾಮದಾಸರ ಮುಂದಿನ ಕೊಂಡಿಯಾಗಿ ಅವಧೂತರಾಗಿ, ನಡೆದಾಡುವ ದೇವರಾಗಿ ಬಾಳಿ ಬದುಕಿದ ಪರಮಪೂಜ್ಯ ಶ್ರೀ ಶ್ರೀಧರ ಸ್ವಾಮಿಗಳ ತಪೋಭೂಮಿಕೆಯಾದದ್ದು ವಿಶೇಷ. ಅವರ ಅಂತಶ್ಚಕ್ಷು,ದಿವ್ಯದೃಷ್ಟಿ ಮತ್ತಾವ ತಾಣವನ್ನೂ ಅರಸದೆ ಇದನ್ನೇ ಸಾಧನೆಯ ಕ್ಷೇತ್ರವನ್ನಾಗಿ ಆಯ್ದುಕೊಂಡದ್ದು ಈ ಸ್ಥಳದ ಮಹಿಮೆಯನ್ನು ಸಾರುತ್ತದೆ.

08-CHNDRA SAALE FROM INNER-1ದೈವಾಂಶ ಸಂಭೂತರಾದ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ಈ ಕ್ಷೇತ್ರಕ್ಕೆ ಆಗಮಿಸಿ, ಕ್ಷೇತ್ರದಲ್ಲಿ ಮಹರ್ಷಿಗಳು,ಸಾಧು ಸಂತರು ನೆಲೆಸಿ ತಪಗೈದ ಮಹತ್ವ ಮನಗಂಡು ಶ್ರೀ ದುರ್ಗಾಂಬಾ ದೇವಿಯ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಧರ್ಮ ಸಂಸ್ಥಾಪನಾ ಸಂಕಲ್ಪದಿಂದ ಶ್ರೀ ದುರ್ಗಾ ದೇವಿಗೆ ಅಷ್ಟಬಂಧ ನಡೆಸಿದರಂತೆ. ಶ್ರೀ ಕ್ಷೇತ್ರದ ಹೆಸರು ದೇಶ-ವಿದೇಶಗಳಲ್ಲಿ ಬೆಳಕು ಕಂಡಿದ್ದು ಶ್ರೀಧರರ ಕೃಪೆಯಿಂದಲೇ. ಶ್ರೀ ದುರ್ಗಾಂಬಾ ದೇವಾಲಯದಿಂದಾಗಿ ಶ್ರೀಧರರು ವರದಳ್ಳಿಯಲ್ಲಿ ನೆಲೆಸಿರುವುದೂ ಅಲ್ಲದೆ ಇಲ್ಲಿಯೇ ಮುಕ್ತರಾಗಿರುವುದೂ ಶ್ರೀ ದೇವಿಯ ಮೇಲೆ ಶ್ರೀ ಸದ್ಗುರುವಿಗೆ ಇರುವ ಅಪಾರ ಭಕ್ತಿಯಿಂದ ಎಂದು ಆಸ್ತಿಕರು ನಂಬುತ್ತಾರೆ.

04-SHRIDHARA SIMHAASANA-1ಶ್ರೀಧರ ಸಿಂಹಾಸನ

ದೇವಾಲಯದ ಆವರಣ ಪ್ರವೇಶಿಸುತ್ತಿದಂತೆಯೇ ಎಡ ಭಾಗದ ಚಂದ್ರ ಸಾಲೆಯ ಆರಂಭದಲ್ಲಿ ಶ್ರೀಧರರ ಭಾವಚಿತ್ರವಿರುವ ಸಿಂಹಾಸನವೊಂದು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಶ್ರೀಧರರು ತಮ್ಮ ಜೀವಮಾನದಲ್ಲಿ ಹೆಚ್ಚಿನ ಪ್ರವಚನವನ್ನು ಇದೇ ಕಟ್ಟೆಯಲ್ಲಿ ಕುಳಿತು ಮಾಡಿದ್ದಾರಂತೆ. ಉತ್ಸವಕಟ್ಟೆ ಅಥವ ಶ್ರೀಧರ ಪ್ರವಚನ ಕಟ್ಟೆ ಎಂದೂ ಇದನ್ನು ಸ್ಥಳೀಯರು ಕರೆಯುತ್ತಾರೆ.

3-MANGALAARATIದೇವಿಯ ಸಾಲಿಗ್ರಾಮಶಿಲಾ ಮೂರ್ತಿ

ದುಷ್ಟ ರಕ್ಕಸ ಮಹಿಷಾಸುರನನ್ನು ಕಾಲಿನಿಂದ ವದ್ದ ಭಂಗಿಯಲ್ಲೇ ಇರುವ ದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ. ಹಾಗಾಗಿ ಇಲ್ಲಿ ವಿಷ್ಣು ಶಕ್ತಿಯೂ ಅಡಕವಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕ ಶ್ರೀಧರ ಭಟ್. ನವರಾತ್ರಿಯಂತಹ ವಿಶೇಷ ದಿನಗಳಲ್ಲಿ ಬೆಳ್ಳಿಯ ಮುಖವಾಡದಿಂದ ಸರ್ವಾಲಂಕೃತಳಾಗುವ ದೇವಿಯನ್ನು ಕಣ್ ತುಂಬಾ ನೋಡಿದರೆ ಎಂತಹ ನಾಸ್ತಿಕರೂ ಆಸ್ತಿರಾಗುವುದರಲ್ಲಿ ಸಂದೇಹವೇ ಇಲ್ಲ.

07-VYAASA TEERTHA okವ್ಯಾಸತೀರ್ಥ

ಚಂದ್ರಸಾಲೆಯ ಹಿಂಭಾಗದ ಮೂಲೆಯಲ್ಲಿ ವ್ಯಾಸತೀರ್ಥ ಮತ್ತು ಆಹ್ನಿಕ ತೀರ್ಥ ಕೂಡ ಭಕ್ತರನ್ನು ಸೆಳೆಯುತ್ತದೆ. ಪುಟ್ಟ ಕೊಳದಂತಿರುವ ಇಲ್ಲಿ ಪುಟ್ಟ ಪುಟ್ಟ ಮೀನುಗಳು ಆಟ ಆಡುವುದನ್ನು ಕಂಡು ಪುಟ್ಟ ಮಕ್ಕಳು ಸಂತಸಪಡುತ್ತಾರೆ.

06-VYAASA GUHEವ್ಯಾಸ ಗುಹೆ

ದೇವಾಲಯದ ಹಿಂಭಾಗದ ಪಾಕಶಾಲೆಯ ಪಕ್ಕದಲ್ಲಿರುವ ವ್ಯಾಸಗುಹೆಯಲ್ಲಿ ಹಿಂದೆ ವ್ಯಾಸಮುನಿಗಳು ತಪಸ್ಸು ಮಾಡುತ್ತಿದ್ದರಂತೆ. ಈಗ ಅದರ ಕುರುಹನ್ನಷ್ಟೇ ನಾವು ಕಾಣಬಹುದು. ಶ್ರೀಧರರು ಇದೇ ಗುಹೆಯಿಂದ ಗುಪ್ತವಾಗಿ ಕಾಶಿಗೂ ಹೋಗುತ್ತಿದ್ದಾರೆಂಬ ಪ್ರತೀತಿ ಇದೆ.

012-DEVI TEERTHA-PUSHKARINIಪುಷ್ಕರಿಣಿ-ದೇವಿ ತೀರ್ಥ

ದೇವಾಲಯದ ಗುಡ್ಡದ ಮೂಲದಿಂದ ಬರುವ ದೇವೀ ತೀರ್ಥವು ದೇವಾಸ್ಥಾನದ ಪಕ್ಕದಲ್ಲಿರುವ ಪುಷ್ಕರಿಣಿಯಲ್ಲಿ ಶೇಖರವಾಗುತ್ತದೆ. ಪಾವಿತ್ರ್ಯ ಭರಿತ ಈ ತೀರ್ಥಪಾನದಿಂದ ಸಕಲ ದುರಿತಗಳೂ,ಭವರೋಗವೂ ನಿವಾರಣೆಯಾಗುತ್ತದೆ.

021-RAMA TEMPLEಯತಿ ಪರಂಪರೆಯ ಶ್ರೀ ರಾಮ ದೇವಾಲಯ

ಹಿಂದೆ ಯಾವುದೋ ಕಾಲದಲ್ಲಿ ಮಠವೊಂದು ಇಲ್ಲಿ ಇತ್ತಂತೆ. ಆ ಮಾಠದ ಯತಿಗಳಿಂದ ಸ್ಥಾಪಿತವಾದ ಈ ರಾಮದೇವಾಲಯದಲ್ಲಿ ಇಂದಿಗೂ ಪೂಜೆ ನಡೆದುಕೊಂಡು ಬರುತ್ತಿದೆ.

015-NAAGA BANAನಾಗಬನ

ಸಾಕ್ಷಾತ್ ಶ್ರೀಧರ ಸ್ವಾಮಿಗಳಿಂದ ಪ್ರತಿಷ್ಠಾಪನೆಗೊಂಡ ನಾಗಬನ ಹಿಂಭಾಗದ ಗುಡ್ಡದ ಮೇಲಿದೆ. “ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯಾವ ರೀತಿ ನೀನು ಭಕ್ತರ ಹರಕೆಯನ್ನು ಸ್ವೀಕರಿಸಿ ಭಕ್ತಾದಿಗಳನ್ನು ಹರುಸುವೆಯೊ ಅದೇ ರೀತಿ ಇಲ್ಲಿ ಕೂಡ ಭಕ್ತರಿಗೆ ಅನುಗ್ರಹಿಸು” ಎಂದು ಪ್ರತಿಷ್ಠಾಪನೆಯಲ್ಲಿ ಶ್ರೀಧರರು ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರಂತೆ. ಅಂತೆಯೇ ಇಂದಿಗೂ ಭಕ್ತಿಯಿಂದ ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸುವವರಿಗೆ ಇಷ್ಠಾರ್ಥ ಸಿದ್ಧಿಯಾಗುತ್ತಿದೆ.

01-FRONT VIEWಶ್ರೀ ದುರ್ಗಾಂಬಾ ದೇವಿಗೆ ತ್ರಿಕಾಲ ಪೂಜೆ ನಡೆಯುವ ಇಲ್ಲಿ ಭಕ್ತರು ಅಪೇಕ್ಷೆ ಪಟ್ಟಲ್ಲಿ ಪ್ರತ್ಯೇಕವಾಗಿ ದೇವಿಯ ಪಾರಯಣವನ್ನೂ,ಚಂಡಿಕಾ ಹವನವನ್ನೂ ನೆರವೇರಿಸಿಕೊಡಲಾಗುತ್ತದೆ. ನಿತ್ಯವೂ ಪ್ರಸಾಧ ಭೋಜನವಿರುವ ಇಲ್ಲಿ ನೀವೂ ಅನ್ನಸಂತರ್ಪಣೆಗೆ ಅನ್ನದಾನಿಗಳಾಗಬಹುದು. ಅಪಾರ ಶಕ್ತಿ ಇರುವ ಈ ಕ್ಷೇತ್ರದ ಅನುಭವ ನಿಮಗಾಗಲಿ. ದೇವಿಯ ಕೃಪೆಗೆ ನೀವೆಲ್ಲಾ ಪಾತ್ರರಾಗುವಂತಾಗಲಿ.

ಹೆಚ್ಚಿನ ಮಾಹಿತಿಗಾಗಿ-ಈ ದೇವಾಲಯದ ಕಛೇರಿಯ ದೂರವಾಣಿ ಸಂಖ್ಯೆ-೦೮೧೮೩-೨೩೬೧೪೫

ಚಿನ್ಮಯ.ಎಂ.ರಾವ್ ಹೊನಗೋಡು
೨೦-೮-೨೦೧೧

**************

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.