September 27, 2017
ಈಕೆ ನಮ್ಮದೇ ಸಿದ್ದಾಪುರದ ಹವ್ಯಕರ ಹುಡುಗಿ. ಅಭಿನಯ, ನೃತ್ಯ, ಯೋಗಾಭ್ಯಾಸದಲ್ಲಿ ಎತ್ತಿದ ಕೈ. ಕಾಲೇಜು ದಿನಗಳಲ್ಲಿಯೇ ಅತ್ಯುತ್ತಮ ನಟಿ ಎಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡಾಕೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕನಸು ಹಾಗೂ ಆದರ್ಶಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಾಕೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಈಕೆಯದು ಮೋಹಿನಿಯ ಪಾತ್ರ. ಮೊದಲ ಧಾರಾವಾಹಿಯೇಲ್ಲಿಯೇ ಸಾಕಷ್ಟು ಸ್ಟ್ರಾಂಗ್ ಹಾಗೂ ಕಠಿಣ ಪಾತ್ರ ನಿರ್ವಹಣೆಯ ಹೊಣೆ ಈಕೆಯ ಹೆಗಲ ಮೇಲಿದೆ. ಧಾರಾವಾಹಿ ಲೋಕಕ್ಕೆ ಕಾಲಿಟ್ಟ ನಮ್ಮೂರ ಹುಡುಗಿಯನ್ನು ಬೆಂಬಲಿಸೋಣ ಬನ್ನಿ..
ಕಣ್ಣಿನಲ್ಲಿ ಅಗಾಧವಾದ ಸಾಧನೆಯ ಕನಸು. ಮನಸ್ಸಿನಲ್ಲಿ ಕಾರ್ಮಿಕರಿಗೆ, ಸಾಮಾಜಿಕವಾಗಿ ಸೌಲಭ್ಯಗಳನ್ನು ಒದಗಿಸುವ ತುಡಿತ. ಕರಗತವಾಗಿರುವ ಅಭಿನಯ ಕಲೆ. ಅಗಾಧವಾದ ಪ್ರತಿಭೆ. ಇವೆಲ್ಲವನ್ನೂ ಇಟ್ಟುಕೊಂಡು ಧಾರವಾಹಿ ಲೋಕಕ್ಕೆ ಕಾಲಿಟ್ಟಿದ್ದಾಳೆ ಭಾರತಿ ಹೆಗಡೆ. ಜೀ ಕನ್ನಡ ವಾಹಿನಿಯಲ್ಲಿ ಆರಂಭಗೊಂಡಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಮೋಹಿನಿ ಪಾತ್ರವನ್ನು ಹಾಕಿರುವ ಭಾರತಿ ಹೆಗಡೆ ಈಗಾಗಲೇ ಬಿತ್ತರವಾಗಿರುವ ಧಾರವಾಹಿ ಟ್ರೇಲರ್ಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾಳೆ. ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಭಾರತಿ ಅವರ ಕನಸ್ಸು ದೊಡ್ಡದಿದೆ. ಹೊಸ ಆಕಾಂಕ್ಷೆಗಳೊಂದಿಗೆ ಧಾರವಾಹಿ ಲೋಕಕ್ಕೆ ಕಾಲಿಟ್ಟಿರರುವ ಭಾರತಿ ಹೆಗಡೆಯವರುಮಾತಿಗೆ ಸಿಕ್ಕಾಗ ತಮ್ಮ ಕುರಿತು, ಆಸೆ, ಆಕಾಂಕ್ಷೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
https://www.youtube.com/watch?v=th4enGHm8nI
ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ನಮ್ಮದು ಕೃಷಿ ಕುಟುಂಬ. ಅಪ್ಪ ಕೃಷಿಕರು. ತಾಯಿ ಗೃಹಿಣಿ. ಅಣ್ಣ ಕೂಡ ಕೃಷಿಕರು. ಪ್ರಾಥಮಿಕ ಶಾಲೆಯ ಅಭ್ಯಾಸವನ್ನು ನಾನು ಊರಿನಲ್ಲಿಯೇ ಮಾಡಿದ್ದೇನೆ. ಉನ್ನತ ಶಿಕ್ಷಣ ಬೆಂಗಳೂರಿನಲ್ಲಿ ಕೈಗೊಂಡಿದ್ದೇನೆ. ಬಿಎ ಪದವಿಯನ್ನು ಬೆಂಗಳೂರಿನ ಅಮ್ಮಣ್ಣಿ ಕಾಲೇಜಿನಲ್ಲಿ ಮಾಡಿರುವ ನಾನು, ಎಂಎಸ್ಡಬ್ಲೂವನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಕೈಗೊಂಡಿದ್ದೇನೆ. ಇನ್ನೂ ಹೆಚ್ಚಿನ ಓದಿನ ಕನಸು ಇದೆ. ಅಭಿನಯದ ಜೊತೆಗೆ ಓದನ್ನು ಮುಂದುವರಿಸುತ್ತಿದ್ದೇನೆ.
* ನಿಮ್ಮ ಅಭಿನಯ, ಆಸಕ್ತಿಗಳ ಕುರಿತು ಹೇಳಿ..
ನನಗೆ ಚಿಕ್ಕಂದಿನಿಂದ ನೃತ್ಯ, ನಟನೆ, ಸಂಗೀತದಲ್ಲಿ ಆಸಕ್ತಿ. ನಾನು ಆಕ್ಟಿಂಗ್ಗೆ ವಿಶೇಷ ತರಬೇತಿಯನ್ನೇನೂ ಪಡೆದುಕೊಂಡಿಲ್ಲ. ಚಿಕ್ಕಂದಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಆಗೆಲ್ಲ ಬಹುಮಾನಗಳು ಬಂದಿವೆ. ನಂತರ ಅದನ್ನೇ ಸ್ವಲ್ಪ ಮಾರ್ಪಡಿಸಿಕೊಂಡೆ. ನಾನು ಭರತನಾಟ್ಯವನ್ನು ಕಲಿತಿದ್ದೇನೆ. ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. 2009ರಿಂದ 2012ರ ವರೆಗಿನ ಕಾಲೇಜು ಅಧ್ಯಯನದ ಸಂದರ್ಭದಲ್ಲಿ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ನಟಿ ಎಂಬ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆಗೆ ಸಂಗೀತ ಕೇಳೋದು ನನ್ನ ಆಸಕ್ತಿಯ ವಿಷಯ. ಯೋಗಾಭ್ಯಾಸ ಮಾಡಿದ್ದೇನೆ. ಯೋಗಾಸನ ನನ್ನ ಆಸಕ್ತಿಯ ವಿಷಯವೂ ಹೌದು.
ಹೌದು. ಅಪ್ಪ, ಅಮ್ಮ ಹಾಗೂ ಅಣ್ಣ ನನ್ನ ನಟನೆ ಹಾಗೂ ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನೀಡುತ್ತಲೂ ಇದ್ದಾರೆ. ನಾನು ಒಳ್ಳೆಯದನ್ನು ಮಾಡಿದಾಗಲೆಲ್ಲ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ. ನನ್ನ ಬೆಳವಣಿಗೆಗೆ ಪೂರಕವಾಗಿ ಉತ್ತೇಜನ ನೀಡಿದ್ದಾರೆ.
ಪೂರ್ಣ ಪ್ರಮಾಣದ, ಮುಖ್ಯ ಪಾತ್ರ ಇರುವ ಧಾರವಾಹಿ ಎಂದರೆ ಅದು ಯಾರೇ ನೀ ಮೋಹಿನಿ. ಈ ಧಾರಾವಾಹಿಗೂ ಮೊದಲು ನಾನು ಬಣ್ಣ ಹಚ್ಚಿದ್ದೆ. 4-5 ವರ್ಷಗಳ ಹಿಂದೆ ಜನಶ್ರೀ ಸುದ್ದಿ ವಾಹಿನಿಗಾಗಿ ತಯಾರಿಸಲಾಗಿದ್ದ `ಸಮಾಜ` ಎಂಬ ಕಿರುಚಿತ್ರ ಸರಣಿಯಲ್ಲಿ ಪಾತ್ರ ಮಾಡಿದ್ದೆ. ನಂತರ ಕಲಸರ್್ ಸೂಪರ್ನಲ್ಲಿ ಬರುತ್ತಿರುವ ಶಾಂತಂ ಪಾಪಂನ ಒಂದು ಎಪಿಸೋಡ್ನಲ್ಲಿ ಸಾಮಾಜಿಕ ಹೋರಾಟಗಾರ್ತಿಯ ಪಾತ್ರ ಮಾಡಿದ್ದೆ. ಇದೀಗ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ.
ಯಾರೇ ನೀ ಮೋಹಿನಿಯಲ್ಲಿ ನನ್ನದು ವಿಶಿಷ್ಟ ಪಾತ್ರ. ಇದರಲ್ಲಿ ಈಗಾಗಲೇ ಸತ್ತುಹೋಗಿರುವ ಮೋಹಿನಿಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಸ್ವಲ್ಪ ವಿಶಿಷ್ಟ ಹಾಗೂ ವಿಭಿನ್ನವಾದ ಪಾತ್ರ ನನ್ನದು. ಈ ಧಾರಾವಾಹಿಯಲ್ಲಿ ಅತ್ತೆಗೆ ಕಾಟ ಕೊಡುವ ಮೋಹಿನಿಯಾಗಿ ನಾನು ನಟನೆ ಮಾಡಿದ್ದೇನೆ. ಪ್ರೀತಿಸುವ ಗಂಡ, ಸಾಯಿಸುವ ಅತ್ತೆ ಇದು ಮುಖ್ಯ ಹಂದರ. ಜೊತೆಯಲ್ಲಿ ಮುಗ್ಧವಾಗಿರುವ ಗಂಡನ ರಕ್ಷಣೆಯ ಹೊಣೆಯೂ ನನ್ನ ಪಾತ್ರಕ್ಕಿದೆ. ಧಾರಾವಾಹಿಯಲ್ಲಿರುವ ಇನ್ನೊಂದು ಮುಖ್ಯ ಪಾತ್ರವಾದ ಬೆಳ್ಳಿಯನ್ನು ನನ್ನ ಗಂಡನ ಜೊತೆಗೆ ಸೇರಿಸುವ ಬಹುಮುಖ್ಯ ಕಾರ್ಯವೂ ಮೋಹಿನಿಯದ್ದು. ಖಂಡಿತವಾಗಿಯೂ ಇದು ನೆಗೆಟಿವ್ ಪಾತ್ರ ಅಂತ ಹೇಳಲಾರೆ. ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ಇದೆ. ಪ್ರತಿ ಹಂತದಲ್ಲಿಯೂ ಗಂಡ ಹಾಗೂ ಬೆಳ್ಳಿಯನ್ನು ಕಾಪಾಡುವ ಪಾತ್ರವಾಗಿ ಪಾಸಿಟಿವ್ ಆಗಿ ಕಾಣಿಸಿಕೊಳ್ಳುವ ನಾನು ಅತ್ತೆಯ ವಿಷಯದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತೇನೆ.
ಶಾಂತಂಪಾಪಂ ನಲ್ಲಿ ನಟಿಸಿದಾಗ ಕೆಲವರು ನನಗೆ ಧಾರವಾಹಿ ಆಫರ್ ಕೊಟ್ಟಿದ್ದರು. ನಂತರ ಯಾರೇ ನೀ ಮೋಹಿನಿ ಧಾರಾವಾಹಿ ಆಡಿಷನ್ ಬಗ್ಗೆ ಗೊತ್ತಾಯಿತು. ಆಡಿಷನ್ನಲ್ಲಿ ಭಾಗವಹಿಸಿದೆ. 2 ಸಾರಿ ಸ್ಕ್ರೀನ್ ಟೆಸ್ಟ್ ನಡೆಯಿತು. ಅದರಲ್ಲಿಯೂ ಆಯ್ಕೆಯಾದೆ. ಈ ಸಂದರ್ಭದಲ್ಲಿ ಶೃತಿ ನಾಯ್ಡು ಅವರು ಪರಿಚಯವಾದರು. ಮೀಡಿಯಾ ಬಗ್ಗೆ ಒಲವಿತ್ತು. ಮುಖ್ಯ ಪಾತ್ರಗಳನ್ನು ಬಯಸಿದ್ದೆ. ಅದೇ ಸಿಕ್ಕಿತು.
* ಮೊದಲ ಪಾತ್ರದಲ್ಲೇ ಮೋಹಿನಿಯಾಗಿದ್ದೀರಲ್ಲ
ಹಾಗೇನೂ ಇಲ್ಲ. ಪಾತ್ರ ಬಹಳ ಸ್ಟ್ರಾಂಗ್ ಆಗಿದೆ. ಮಾಧುರಿ ದೀಕ್ಷಿತ್ ಅಂತಹ ಮಹಾನ್ ನಟಿಯರೇ ಮೋಹಿನಿಯ ಪಾತ್ರ ಮಾಡಿದ್ದಾರೆ. ನನಗೆ ಬಹಳ ಸವಾಲಿನ ಪಾತ್ರ. ಮೋಹಿನಿಯಾಗಿದ್ದಕ್ಕೆ ಖಂಡಿತವಾಗಿಯೂ ಬೆಜಾರಿಲ್ಲ. ಖುಷಿಯಾಗುತ್ತಿದೆ. ಎಲ್ಲರೂ ಈಗೀಗ ನನ್ನನ್ನು ಮೋಹಿನಿ ಅಂತಲೇ ಕರೆಯುತ್ತಿದ್ದಾರೆ. ಬಹಳ ಸಂತೋಷವಾಗ್ತಿದೆ. ಈಗ ಕೆಲವು ದಿನಗಳ ಕಾಲ ನನ್ನ ಪಾತ್ರ ಮೋಹನಿಯಾಗಿ ಬರುತ್ತದೆ. ಕೆಲವು ದಿನಗಳ ನಂತರ ಫ್ಲಾಷ್ಬ್ಯಾಕ್ ಕಥೆ ಆರಂಭವಾಗುತ್ತೆ. ಅಲ್ಲಿ ನನ್ನ ನಿಜವಾದ ಪಾತ್ರ ಆರಂಭ ಅನ್ನಬಹುದು
* ಧಾರಾವಾಹಿ ತಂಡ ಹೇಗಿದೆ?
ಧಾಆರಾವಾಹಿ ಟೀಂ ಸಂಪೂರ್ಣ ಬೆಂಬಲ ನೀಡುತ್ತಿದೆ. ಎಪಿಸೋಡ್ ನಿರ್ದೇಶಕರಾದ ಸಂತೋಷ್ ಗೌಡರ್ ಅವರು ಎಲ್ಲ ಸಂದರ್ಭಗಳಲ್ಲಿಯೂ ಬೆಂಬಲ ನೀಡುತ್ತಾರೆ. ಸಲಹೆ, ಸಹಕಾರ ನೀಡುತ್ತಾರೆ. ನನಗೆ ನಟನೆ ಕಷ್ಟವೇನಲ್ಲ. ಮೊದಲ ಸಾರಿ ಕ್ಯಾಮರಾಆ ಎದುರಿಸಿದಾಗ ಭಯವೇನೂ ಆಗಲಿಲ್ಲ. ಆಂಕರಿಂಗ್ ಮಾಅಡುತ್ತ ಬಂದವಳಾದ್ದರಿಂದ ಸ್ಟೇಜ್ ಫಿಯರ್ ಕೂಡ ಇರಲಿಲ್ಲ. ಹೀಗಾಗಿ ಮೊದಲ ಸಾರಿ ಕ್ಯಾಮರಾ ಎದುರಿಸಿದ್ದಕ್ಕೆ ತೊಂದರೆ ಏನೂ ಆಗಲಿಲ್ಲ.
ನಾನು ಊರಿನಿಂದ ಬಂದು 8 ವರ್ಷಗಳೆ ಆದವು. ಯಾರೇ ನೀ ಮೋಹಿನಿ ಧಾರವಾಹಿ ಶುರುವಾದ ನಂತರ ಊರಿಗೆ ಹೋಗಿಲ್ಲ. ಆದರೆ ಊರಿನಿಂದ ಪೋನ್ಗಳು ಬರುತ್ತಿರುತ್ತವೆ. ಪಾಸಿಟಿವ್ ರೆಸ್ಪಾನ್ಸ್ ಇದೆ. ಫೇಸ್ ಬುಕ್ಕಲ್ಲಿ ಕೂಡ ಒಳ್ಳೆಯ ರೆಸ್ಪಾನ್ಸ್ ಇದೆ. ನನಗೆ ಪ್ರೆಂಡ್ಸ್ ಕಡಿಮೆ. ಕಡಿಮೆ ಅನ್ನುವುದಕ್ಕಿಂತಲೂ ಹೆಚ್ಚಾಗಿ, ನಾನು ಸೆಲೆಕ್ಟಿವ್. ಬಳಗದವರೆಲ್ಲ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ.
ಧಾರಾವಾಹಿ ಲೋಕಕ್ಕೆ ಬರುವ ಮೊದಲು ನಾನು ಲೇಬರ್ ಡಿಪಾರ್ಟ್ಮೆಂಟಿನಲ್ಲಿ ನಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. 2014-15ರಲ್ಲಿ ಈ ಕೆಲಸ ಮಾಡುತ್ತಿದ್ದ ನಾನು ನಂತರದಲ್ಲಿ ಅದನ್ನು ಬಿಟ್ಟಿದ್ದೇನೆ. ಎನ್ಜಿಓಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನನಗೆ ಮೊದಲಿನಿಂದಲೂ ಆಸಕ್ತಿ. ನನ್ನದೇ ಆದ ಎನ್ಜಿಓ ಆರಂಬಿಸುವ ಆಸೆಯೂ ಇದೆ. ಸಾಮಾಜಿಕವಾಗಿ ಜನಸಾಮಾನ್ಯರಿಗೆ ಸಹಾಯ ಮಾಡುವ ಗುರಿ ಇದೆ. ಇದೀಗ ನಾನು ಚಂದ್ರಾ ಲೇ ಔಟ್ನಲ್ಲಿ ವಾರದಲ್ಲಿ ಐದು ದಿನಗಳ ಕಾಲ ಯೋಗಾಸನ ಕ್ಲಾಸ್ ನಡೆಸುತ್ತಿದ್ದೇನೆ. ಜೊತೆಯಲ್ಲಿ ಪ್ರಚೋದಯ ನಾಟ್ಯಾಲಯ ಎನ್ನುವ ಭರತನಾಟ್ಯ ಶಾಲೆಯನ್ನೂ ಕೂಡ ತೆರೆದಿದ್ದೇನೆ. ಆಸಕ್ತರಿಗೆ ನೃತ್ಯ ಹೇಳಿಕೊಡುತ್ತಿದ್ದೇನೆ.
ಹೌದು ಬಹಳಷ್ಟು ಆಫರ್ ಬಂದಿದೆ. ಎಲ್ಲ ಆಫರ್ಗಳೂ ಸಿನೆಮಾಗಳಿಗೇ ಬಂದಿದೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ಸುದೀಪ್, ದರ್ಶನ್, ಪುನೀತ್ ಸರ್ ಅವರ ಜೊತೆಗೆ ನಟಿಸಲು ಆಸೆಯಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಆಸಕ್ತಿ ಇದೆ. ಈ ಕಾರಣದಿಂದ, ಸಿನೆಮಾಗಳಲ್ಲಿ ಆಫರ್ ಬಂದರೆ ಮಾಡಲೋ, ಬೇಡವೋ ಅನ್ನುವ ಗೊಂದಲವೂ ಕಾಡುತ್ತಿದೆ. ಆದರೆ ಪಾತ್ರ ಚನ್ನಾಗಿದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಮಾಡೆಲಿಂಗ್ ಆಫರ್ ಕೂಡ ಬರ್ತಿದೆ. ಆದರೆ ಮೊದಲೇ ಹೇಳಿದಂತೆ ನಾನು ಸೆಲೆಕ್ಟಿವ್. ಕಥೆ ಚನ್ನಾಗಿರಬೇಕು. ಪಾತ್ರ ಕೂಡ.
Vinay Hegde
September 27, 2017
Source : https://aghanashini.blogspot.in/2017/09/blog-post_27.html?spref=fb