ವಿಶ್ವ ವಿಖ್ಯಾತ ಜೋಗ ಜಲಪಾತದ ಸಮೀಪ ಮಾವಿನಗುಂಡಿಯಲ್ಲಿ ಅತಿ ವಿಶಿಷ್ಟ ಸ್ಮಾರಕವೊಂದನ್ನು ರೂಪಿಸಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ ನಿರಾಕರಣೆ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟೀಷರಿಂದ ಸೆರೆವಾಸ ಅನುಭವಿಸಿದ ಗ್ರಾಮೀಣ ಮಹಿಳೆಯರ ದಿಟ್ಟ ಹೋರಾಟದ ಸತ್ಯದ ಚಿತ್ರಣ ಈ ಸ್ಮಾರಕದ ಪ್ರಮುಖ ತಿರುಳಾಗಿದೆ.
ಜೋಗದಿಂದ ಕೇವಲ ೪ ಕಿ.ಮೀ.ದೂರದ ಮಾವಿನಗುಂಡಿ ಈಗ ಪ್ರವಾಸಿಗರ ಸಂದರ್ಶನಾ ಸ್ಥಳವಾಗಿ ಬದಲಾಗಿದೆ. ಜೋಗ-ಹೊನ್ನಾವರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಈ ಸ್ಮಾರಕ ಆಕರ್ಷಕ ರಚನೆಯಿಂದ ಬಹು ದೂರದಿಂದಲೇ ಪ್ರವಾಸಿಗರನ್ನು ಸೆಳೆಯುವಂತಿದೆ.
ಕಳೆದ ೨ ವರ್ಷಗಳಿಂದ ಈ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದ್ದು ಕರ್ನಾಟಕ ಅರಣ್ಯ ಇಲಾಖೆಗೆ ಸೇರಿದ ಈ ಸ್ಥಳದಲ್ಲಿ ಬಹು ವರ್ಷಗಳ ಹಿಂದೆ ಪೋಲೀಸ್ ಹೊರಠಾಣೆ ಇತ್ತು. ಈ ಠಾಣೆ ರದ್ದಾದ ನಂತರ ಕಟ್ಟಡ ಬಳಕೆಯಿಲ್ಲದೆ ಶಿಥಿಲಗೊಂಡು ಹಂಚು ಮತ್ತು ಕಲ್ಲುಗಳು ಉದುರಿ ಬಿದ್ದು ಅಳಿದು ಹೋಗುವ ಹಾದಿಯಲ್ಲಿತ್ತು.
೧೯೩೦ ರಿಂದ ೧೯೩೫ ರವರಗೆ ದೇಶದಲ್ಲೆಲ್ಲೆಡೆ ಕರ ನಿರಾಕರಣೆ ಮತ್ತು ಅಸಹಕಾರ ಚಳುವಳಿ ಜೋರಾಗಿತ್ತು. ಬೆಂಗಳೂರು ಸನಿಹದ ಕನಕಪುರದ ವೆಂಕಟರಾಮಯ್ಯ ಮತ್ತು ಅವರ ಪತ್ನಿ ಗೌರಮ್ಮ ೪-೫ ವರ್ಷಗಳ ಕಾಲ ಸಿದ್ದಾಪುರದಲ್ಲಿ ನೆಲೆಸಿ ಸುತ್ತಮುತ್ತ ಗ್ರಾಮೀಣ ಪ್ರದೇಶದಲ್ಲಿ ಚಳುವಳಿ ಚುರುಕುಗೊಳಿಸಿದರು. ಸಿದ್ದಾಪುರ, ತಡಗಳಲೆ, ಕಾನಲೆ, ದೊಡ್ಮನೆ, ತ್ಯಾಗಲಿ,ಹಣಜಿಬೈಲು, ಕುಳಿಬೀಡು,ಗುಂಜಗೋಡು,ಹೊಸಕೊಪ್ಪ, ಹೆಗ್ಗಾರು ಇತ್ಯಾದಿ ಪ್ರದೇಶದಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಧುಮುಕಿದರು.
(ರಂಗನಾಥ ದಿವಾಕರ ಅವರ ಕರನಿರಾಕರಣೆಯ ವೀರ ಕಥೆ ಎಂಬ ಪುಸ್ತಕದಲ್ಲಿ ಇಲ್ಲಿನ ಚಳಿವಳಿಯ ವಿವರ ದಾಖಲಾಗಿದೆ.)
ಇಲ್ಲಿನ ಈ ವಿಶಿಷ್ಟಪೂರ್ಣ ಸ್ಮಾರಕದಲ್ಲಿ ಮಹಿಳಾ ಸತ್ಯಾಗ್ರಹಿಗಳ ಮೂರ್ತಿ ರಚಿಸಲಾಗಿದೆ. ಘಟನೆಯ ದೃಶ್ಯವನ್ನು ಬಿಂಬಿಸಲಾಗಿದೆ. ಮಹಿಳೆಯರನ್ನು ಕಾರಾಗ್ರಹಕ್ಕೆ ಹಾಕಿದ ದೃಶ್ಯ ರೂಪಿಸಲಾಗಿದೆ. ಹುಬ್ಬಳಿಯ ಉತ್ಸವ್ ರಾಕ್ ಗಾರ್ಡನ್ ನ ಕಲಾವಿದರು ಇಲ್ಲಿ ದುಡಿದು ನೈಜತೆಯ ಚಿತ್ರಣ ನೀಡಿದ್ದಾರೆ.
ಜೋಗಕ್ಕೆ ಆಗಮಿಸಿದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿದರೆ ಕರ ನಿರಾಕರಣೆ ಚಳುವಳಿಯ ರೋಮಾಂಚನಕಾರಿ ಅನುಭವವಾಗುತ್ತದೆ.
ಪೋಟೋ ಮತ್ತು ಲೇಖನ- ಎನ್.ಡಿ,ಹೆಗಡೆ ಆನಂದಪುರಂ
30-8-2012