ಭಕ್ತರ ಬಾಳನ್ನು ಬಂಗಾರಗೊಳಿಸುವ ಬಂಗಾರಮಕ್ಕಿಯ ಶ್ರೀವೀರಾಂಜನೇಯ

ಅಂಜನಾದೇವಿಯ ಸುತ ಆಂಜನೇಯನ ಕ್ಷೇತ್ರಗಳು ನಮ್ಮ ನಾಡಿನಲ್ಲಿ ಅದೆಷ್ಟೋ ಇವೆ. ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿ, ಸದಾ ನಂಬಿದ ಭಕ್ತರನ್ನು ಬೆಂಬಿಡದೆ ಕಾಯುವ ಆಂಜನೇಯ ಭಕ್ತಿ ಮತ್ತು ಶಕ್ತಿಗಳ ಪ್ರತೀಕವಾಗಿದ್ದಾನೆ. ಸದಾ ನಿಷ್ಠೆ,ನಿಯಮ ಮತ್ತು ವ್ರತಾಧಾರಿಗಳಾಗಿ ಆರಾಧಿಸುವವರಲ್ಲಿ ಆಹ್ವಾನಿತನಾಗಿ ದರ್ಶನದ ಮೂಲಕ ಕಾರಣಿಕ ಮತ್ತು ಭಕ್ತರ ಸಂಕಷ್ಟಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಆಂಜನೇಯ ಕ್ಷೇತ್ರ ಕೆಲವಡೆ ಖ್ಯಾತವಾಗಿದೆ. ಇಂತಹ ಅಪರೂಪದ ಕ್ಷೇತ್ರಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪೆಯ ಶ್ರೀಬಂಗಾರಮಕ್ಕಿ ಕ್ಷೇತ್ರ ನಾಡಿನ ಉದ್ದಗಲಕ್ಕೂ ಖ್ಯಾತವಾಗಿದೆ.

ಹೆಮಪುರದೊಡೆಯನ ಭವ್ಯ ಚರಿತ್ರೆ

ಒಂದು ಕಾಲದಲ್ಲಿ ನಿರ್ಜನ ಪ್ರದೇಶವಾಗಿದ್ದ ಈ ಕ್ಷೇತ್ರ ಇಂದು ಭವ್ಯ ಕ್ಷೇತ್ರವಾಗಿ ಬೆಳೆದಿದೆ. ಇಂದು ಈ ಕ್ಷೇತ್ರದ ಧರ್ಮದರ್ಶಿಯಾಗಿರುವ ಶ್ರೀಮಾರುತಿ ಗುರೂಜಿ ದರ್ಶನದ ಮೂಲಕ ಜನರ ಭೂತ ಭವಿಷ್ಯಗಳ ಬಗ್ಗೆ ವಿಶ್ಲೇಶಿಸಿ ಸಂಕಷ್ಟ ನಿವಾರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶ್ರೀಆಂಜನೇಯನೇ ಇವರ ಮೂಲಕ ಮಾತನಾಡುತ್ತಾನೆ ಎಂಬ ಪ್ರತೀತಿ ಇದ್ದು ಈ ಕಾರಣದಿಂದ ಮಾರುತಿ ಗುರೂಜಿಯವರನ್ನು ಮಾತನಾಡುವ ದೇವರು ಎಂದು ಗುರುತಿಸಲಾಗಿದೆ.
ಇವರ ತಂದೆ ಗಣೇಶ ಭಟ್ ಶರಾವತಿ ನದಿ ತಟದ ಎಡ ದಂಡೆಯಲ್ಲಿ ನೆಲೆಯಾದ ಐತಿಹಾಸಿಕ ಖ್ಯಾತಿಯ ಶ್ರೀವೀರಾಂಜನೇಯ ದೇವರ ಆರಾಧಕರಿದ್ದರು. ಒಂದು ದಿನ ಕನಸಿನಲ್ಲಿ ಆಂಜನೇಯ ಕಾಣಿಸಿಕೊಂಡು ತನ್ನ ವಿಗ್ರಹ ನದಿಯಲ್ಲಿ ಮುಳುಗಿದೆ. ಮೇಲಕ್ಕೆತ್ತಿ ತನ್ನ ಮೂಲ ಕ್ಷೇತ್ರವಾದ ಬಂಗಾರಮಕ್ಕಿಯಲ್ಲಿ ಗುಡಿ ಕಟ್ಟಿಸಿ ಪೂಜಿಸಿದರೆ ಲೋಕ ಕಲ್ಯಾಣದ ಮಾರ್ಗ ತೋರುತ್ತೇನೆ ಎಂದು ನುಡಿದನಂತೆ. ಅಂತಯೇ ಗಣೇಶ ಭಟ್ ಅವರು ಭಗವಾನ್ ಶ್ರೀಧರ್ ಸ್ವಾಮಿಗಳಲ್ಲಿ ಈ ಬಗ್ಗೆ ನಿವೇದಿಸಿದರು. ಶ್ರೀಧರರು ಆಗಮಿಸಿ ಸ್ವಪ್ನದಲ್ಲಿನ ಲಕ್ಷಣಗಳನ್ನು ಒಳಗೊಂಡ ಸ್ಥಳ ಹುಡುಕಿದಾಗ ಈಗಿನ ಬಂಗಾರಮಮಕ್ಕಿಯಲ್ಲಿ ಶ್ರೀಆಂಜನೇಯನ ಶಕ್ತಿ ಕ್ಷೇತ್ರವನ್ನು ಗುರುತಿಸಿದರು. ಈ ಆಧಾರದಲ್ಲಿ ಶ್ರೀವೀರಾಂಜನೇಯ ಸ್ವಾಮಿಗೆ ಗುಡಿ ನಿರ್ಮಿಸಿ ನಿತ್ಯ ತ್ರಿಕಾಲ ಪೂಜೆ ಆರಂಭಿಸಲಾಯಿತು. ಚಿಕ್ಕ ಗುಡಿಯಿಂದ ಆರಂಭವಾದ ದೇಗುಲ ಇಂದು ಬೃಹತ್ ಆಕಾರದಲ್ಲಿ ಬೆಳೆದಿದ್ದು ಹಲವು ಸಾಮಾಜಿಕ, ಧಾರ್ಮಿಕ ,ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆದು ನಿಂತಿದೆ. ರಾಮಾಯಣದಲ್ಲಿ ಶ್ರೀರಾಮನ ಬಂಟನಾಗಿ ಮೆರೆದ ಹನುಮ ದೇವರು ಜನಿಸಿದ ಸ್ಥಳ ಇದು ಎಂಬ ಪ್ರತೀತಿ ಸಹ ಇದೆ. ಶೃಂಗೇರಿ ಶಾರದಾ ಪೀಠದ ಶ್ರೀಭಾರತಿ ತೀರ್ಥರು ಇಲ್ಲಿಗೆ ಆಗಮಿಸಿದಾಗ ಕ್ಷೇತ್ರದ ಶಕ್ತಿ ಮತ್ತು ವಿಶಿಷ್ಟ ಲಕ್ಷಣಗಳನ್ನು ಗುರುತಿಸಿ ಹೇಮಪುರದ ಘನ ಗಂಭೀರ ಎಂದು ದೇವರನ್ನು ಸ್ತುತಿಸಿದರು.ಇದರಿಂದಾಗಿ ಇದು ಹೇಮಪುರ ಎಂದೂ ಕರೆಯಲ್ಪಡುತ್ತಿದೆ.

ನಿತ್ಯ ಪೂಜೆ-ವರ್ಷವಿಡೀ ಉತ್ಸವ-ಹನುಮಜಯಂತಿಯಂದು ಮಹಾರಥೋತ್ಸವ

ಈ ದೇಗುಲದಲ್ಲಿ ದೇವರಿಗೆ ತ್ರಿಕಾಲ ಪೂಜೆ, ಅಭಿಷೇಕ, ಮಹಾನೈವೇದ್ಯ ನಡೆಸಲಾಗುತ್ತದೆ. ಯುಗಾದಿಯಂದು ವಸಂತೋತ್ಸವ, ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಯುಗಾದಿಯ ಪಾಢ್ಯದಿಂದ ನವಮಿ ವರೆಗೆ ಶ್ರೀರಾಮೋತ್ಸವ, ಅಖಂಡ ಭಜನೆ, ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತದೆ. ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆಯಂದು ಹನುಜಯಂತಿ ಸಂದರ್ಭದಲ್ಲಿ ಶ್ರೀದೇವರಿಗೆ ಬ್ರಹ್ಮರಥೋತ್ಸವ ನಡೆಸಲಾಗುತ್ತದೆ. ರಾಮ ನವಮಿಯಿಂದ ಚೈತ್ರ ಮಾಸದ ಹುಣ್ಣಿಮೆಯವರೆಗೆ ನಿತ್ಯ ಶ್ರೀರಾಮತಾರಕ ಹವನ, ಆಂಜನೇಯ ಮೂಲಮಂತ್ರ ಹವನ, ಸುಂದರಕಾಂಡ ಪಾರಾಯಣ, ರುದ್ರ ಪಾರಾಯಣ, ಆಹೋತಾತ್ರಿ ಭಜನೆ, ಹನುಮ ಜಯಂತಿಯಂದು ಸತ್ಯಮಾರುತಿ ವೃತ ನಡೆಸಲಾಗುತ್ತದೆ.

ಶ್ರಾವಣಮಾಸದಂದು ನಿತ್ಯ ಪಾರಾಯಣ ಪೂಜೆ, ಸಹಸ್ರನಾಮ ಸಹಿತ ಅಭಿಷೇಕ, ರುದ್ರಾಭಿಷೇಕ ನಡೆಸಲಾಗುತ್ತದೆ. ಭಾದ್ರಪದ ಚೌತಿಯಂದು ವಿಶೇಷ ಅಂಲಕಾರ ಪೂಜೆ, ಪ್ರದಕ್ಷಿಣಾ ಸಹಿತ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಆಶ್ವೀಜ ಮಾಸದಲ್ಲಿ ಶುಕ್ಷ ಪಕ್ಷದ ಪಾಢ್ಯದಿಂದ ದಶಮಿಯವರೆಗೆ ದಸರಾ ಉತ್ಸವ, ನಿತ್ಯ ಭಜನೆ, ಪ್ರಾಕಾರೋತ್ಸವ ನಡೆಸಲಾಗುತ್ತದೆ. ಶರನ್ನವರಾತ್ರಿಯ ಪಾಢ್ಯದಿಂದ ಹುಣ್ಣಿಮೆಯವರೆಗೆ ನಿತ್ಯ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ಯ ರಾತ್ರಿ ಸಾಲಂಕೃತಕ ದೀಪೋತ್ಸವ ,ಪಂಚಕಜ್ಜಾಯ ನೈವೇದ್ಯ ನಡೆಯುತ್ತದೆ. ಕಾತೀಕ ಹುಣ್ಣಿಮೆಯಂದು ಉತ್ಸವ ಮೂರ್ತಿಗೆ ಪಲಕ್ಕಿ ಉತ್ಸವ ಮತ್ತು ವನಭೋಜನ ನಡಸಲಾಗುತ್ತದೆ.

ದೇವಾಲಯದ ದತ್ತಿ ಸಂಸ್ಥೆಗಳನ್ನು ಸಂಸ್ಥಾಪಿಸಿ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಔಷಧ ವನ ನಿರ್ಮಾಣ, ಪುಷ್ಕರಿಣಿ ನಿರ್ಮಾಣ, ಬೃಹತ್ ಧ್ವಜ ಸ್ತಂಭ ಸ್ಥಾಪನೆ ಇತ್ಯಾದಿ ಹಲವು ಯೋಜನೆಗಳು ಕಾರ್ಯಾರಂಭಗೊಂಡಿದ್ದು ಈ ಕ್ಷೇತ್ರ ಸದಾ ಹಲವು ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ.

ದರ್ಶನಕ್ಕೆ ನೂಕು ನುಗ್ಗಲು :

ಶುಕ್ರವಾರ, ಶನಿವಾರ ,ಭಾನುವಾರ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಇಲ್ಲಿನ ದೇವರು ಮಾರುತಿ ಗುರೂಜಿಯವರ ಮೂಲಕ ದರ್ಶನ ನೀಡುತ್ತಾನೆ,. ಈ ದರ್ಶನದಲ್ಲಿ ಭಕ್ತರ ವಿವಿಧ ಸಮಸ್ಯೆಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಾಗುತ್ತದೆ, ರಾಜ್ಯದ ವಿವಿದೆಡೆಗಳಿಂದ ಭಕ್ತರು ಆಗಮಿಸಿ, ಸ್ನಾನಾದಿಗಳಿಂದ ಶುಚಿರ್ಭೂತರಾಗಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಆಗಮಿಸುತ್ತಾರೆ. ವಿದ್ಯೆ, ಸಂತಾನಪ್ರಾಪ್ತಿ, ಜಮೀನು ಮನೆಗಳ ವ್ಯಾಜ್ಯ, ದಂಪತಿಗಳಲ್ಲಿ ವಿರಸ, ಉದ್ಯೋಗ ಪ್ರಾಪ್ತಿ, ವ್ಯಾಪಾರ ವ್ಯವಹಾರದಲ್ಲಿ ವೃದ್ಧಿ, ಮಾನಸಿಕ ಶಾಂತಿ, ಕುಟುಂಬದಲ್ಲಿ ನೆಮ್ಮದಿ, ಜಾನುವಾರುಗಳ ಶ್ರೇಯೋಭಿವೃದ್ಧಿ ಇತ್ಯಾದಿಗಳ ಕುರಿತು ಭಕ್ತರು ಇಲ್ಲಿಗೆ ಬಂದು ಹರಕೆ ಹೊರುತ್ತಾರೆ.

ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರ :

ಈ ಕ್ಷೇತ್ರಕ್ಕೆ ಭಕ್ತಿ ಭಾವಗಳಿಂದ ಆಗಮಿಸುವಂತೆ ಪ್ರವಾಸಕ್ಕಾಗಿ ಸಹ ಹಲವರು ಆಗಮಿಸುತ್ತಾರೆ. ಅನತಿ ದೂರದಲ್ಲಿ ಸುಂದರ ಶರಾವತಿ ನದಿ, ದೇಗುಲದ ಎದುರು ವಿಶಾಲವಾದ ಬಯಲು, ನಿತ್ಯವೂ ಉಚಿತ ಭೋಜನ ವ್ಯವಸ್ಥೆ, ಸನಿಹದಲ್ಲಿಯೇ ಸುಂದರ ಕಾಡು, ನದಿ ಆಚೆಯಿಂದ ಸ್ವಲ್ಪ ದೂರ ಸಾಗಿದರೆ ಕಾಳುಮೆಣಸಿನ ರಾಣಿ ಎಂದೇ ಖ್ಯಾತವಾದ ೧೬ ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ರಾಣಿ ಭೈರಾದೇವಿ ನಿರ್ಮಿಸಿದ ಚತುರ್ಮುಖ ಬಸದಿ ಇತ್ಯಾದಿಗಳ ಕಾರಣ ಹಲವು ಪ್ರವಾಸಿಗರು ನಿತ್ಯವೂ ಇಲ್ಲಿಗೆ ಭೇಟಿ ನೀಡುತ್ತಾರೆ.

ಫೋಟೋ ಮತ್ತು ಲೇಖನ- ಎನ್.ಡಿ,ಹೆಗಡೆ ಆನಂದಪುರಂ
೪-೭-೨೦೧೩

ದೇವಾಲಯದ ವಿಳಾಸ ಮತ್ತು ದೂರವಾಣಿ ಸಂಖ್ಯೆ

ಶ್ರೀ ಕ್ಷೇತ್ರ ಬಂಗಾರುಮಕ್ಕಿ
ಗೇರುಸೊಪ್ಪ-ಅಂಚೆ, ಹೊನ್ನಾವರ ತಾಲೂಕು-581384
ಉತ್ತರಕನ್ನಡ ಜಿಲ್ಲೆ
ದೂರವಾಣಿ-08387-268333 / 268544 / 268545

E-mail- marutiguruji@gmail.com / bangaramakki@gmail.com
Web site- www.bangaramakki.org

Exit mobile version