ಗುರುದತ್ ಶ್ರೀಕಾಂತ್ ಪರಿಶ್ರಮ ಅವಿರತ … ಬರುತಲಿದೆ..ಟೊಳ್ಳು ನಿರೀಕ್ಷೆಗಳ ನಡುವೆ ಗಟ್ಟಿ ಸಿನಿಮಾ, ಅದುವೇ “ಮೂಕವಿಸ್ಮಿತ” !

-ಚಿನ್ಮಯ ಎಂ.ರಾವ್

ಇಂದು ಚಿತ್ರರಂಗದ ವಿವಿಧ ವಿಭಾಗಗಳಿಗೆ ಕಾಲಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೇ. ಆದರೆ ಹೀಗೆ ಕಾಲಿಡುವವರ ಅನುಭವ, ಸಂಸ್ಕಾರ, ಗೊತ್ತು ಗುರಿ ಎಷ್ಟರ ಮಟ್ಟೆಗೆ ಗುಣಾತ್ಮಕವಾಗಿದೆ ಎನ್ನುವುದೇ ಮುಖ್ಯ. ಈ ಎಲ್ಲಾ ಅಂಶಗಳೇ ಆಯಾ ಕಾಲಘಟ್ಟದ ಚಿತ್ರರಂಗದ ಮೇಲೆ ಹಾಗು ಅದಕ್ಕಿಂತ ಮಿಗಿಲಾಗಿ ಈ ಸಮಾಜದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬಿರುತ್ತದೆ. ತಮ್ಮ ತಮ್ಮ ಸ್ವಾರ್ಥ ಸಾಧನೆಗಳಿಗೆ ಚಿತ್ರರಂಗವನ್ನು ಸಾಧನವಾಗಿಸಿಕೊಳ್ಳುವವರ ಹೊರತಾಗಿ ಚಿತ್ರರಂಗದಲ್ಲಿ ನಿಜವಾಗಿಯೂ ಸಾಧನೆ ಮಾಡಿ ಕಲಾಪ್ರಪಂಚಕ್ಕೆ ಕೊಡುಗೆ ನೀಡಬೇಕು, ಸ್ವತಹ ತಾವೇ ಕೊಡುಗೆಯಾಗಬೇಕೆಂಬ ಭಾವ ತುಂಬಿಕೊಂಡವರೂ ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ, ಅಂಥವರಲ್ಲಿ ಈ ಯುವಕ, ಯುವ ನಿರ್ದೇಶಕ ಗುರುದತ್ ಶ್ರೀಕಾಂತ್ ಕೂಡ ಒಬ್ಬರು ಎಂದರೆ ಅದೇನು ಅತಿಶಯೋಕ್ತಿಯಾಗುವುದಿಲ್ಲ. ಏಕೆಂದರೆ ಇವರು ಈಗಾಗಲೇ ” ಗೇಮ್ ಆಫ್ ಶ್ಯಾಡೋಸ್ ” ಎಂಬ ಮೂವತ್ತು ನಿಮಿಷದ ಕಿರುಚಿತ್ರವನ್ನು ಮಾಡಿ ಈಗಾಗಲೇ ತಾವೊಬ್ಬ ಭವಿಷ್ಯದ ಯಶಸ್ವಿ ನಿರ್ದೇಶಕನಾಗಬಲ್ಲೆನೆಂಬ ಭರವಸೆಯನ್ನು ಮೂಡಿಸಿದ್ದಾರೆ.

ಪ್ರೇಕ್ಷಕರಿಂದ ಮೆಚ್ಚುಗೆಯ ಸುರಿಮಳೆ !

ಬೆಂಗಳೂರಿನಲ್ಲಿ ” ಗೇಮ್ ಆಫ್ ಶ್ಯಾಡೋಸ್ ” ಕಿರುಚಿತ್ರದ ಪ್ರದರ್ಶನ ಹಾಗು ಸಂವಾದವನ್ನು ಒಂದು ಬಾರಿ ಆಯೋಜಿಸಿ ಕಿಕ್ಕಿರುದು ನೆರೆದಿದ್ದ ಪ್ರೇಕ್ಷಕರಿಂದ ಮೆಚ್ಚುಗೆಯ ಸುರಿಮಳೆ ಪಡೆದಿದ್ದ ಗುರುದತ್ ಆನಂತರದಲ್ಲಿ ಪ್ರೇಕ್ಷಕರ ಒತ್ತಾಸೆಯ ಮೇರೆಗೆ ಮತ್ತೆ ಎರಡನೆಯ ಬಾರಿ ಅಂಥದ್ದೇ ಕಾರ್ಯಕ್ರಮವನ್ನು ಆಯೋಜಿಸುವಂತಾಯಿತು. ಈ ಕಿರುಚಿತ್ರ ಇಂದಿನ ದಾರಿ ತಪ್ಪುತಿರುವ ಹುಡುಗರಿಗೆ ದಿಕ್ಕು ತೋರಿಸುವಂತಿತ್ತು. ಹಾಗಾಗಿ ಹಿರಿಕಿರಿಯರಾದಿಯಾಗಿ ಎಲ್ಲರೂ ಇವರ ಪ್ರಯತ್ನವನ್ನು ಹಾಗು ನೀಡಿದ ಸಂದೇಶವನ್ನು ಮೆಚ್ಚಿಕೊಂಡಿದ್ದರು.

ಇದಕ್ಕೆ ಸಾಕ್ಷಿ ಎಂಬಂತೆ ಸುಚಿತ್ರ ಫಿಲ್‍ಂ ಸೊಸೈಟಿ ಆಯೋಜಿಸಿದ್ದ ಕಿರುಚಿತ್ರಗಳ ಸ್ಪರ್ಧೆಯಲ್ಲಿ ( ಬೆಂಗಳೂರ್ ಇಂಟರ್ ನ್ಯಾಷನಲ್ ಶಾರ್ಟ್ ಫಿಲ್‍ಂ ಫೆಸ್ಟಿವಲ್-2015) ನಾಮಿನೇಟ್ ಆಗಿದ್ದ 250 ಚಿತ್ರಗಳ ಪೈಕಿ ಗೇಮ್ ಆಫ್ ಶ್ಯಾಡೋಸ್ ಕೂಡ ಒಂದಾಗಿತ್ತು. ದಿಗ್ಗಜರಾದ ಪ್ರಕಾಶ್ ರೈ ಹಾಗೂ ಪ್ರಕಾಶ್ ಬೆಳವಾಡಿ ಅವರ ನೇತೃತ್ವದಲ್ಲಿ ನಡೆದಿದ್ದ ಈ ಸ್ಪರ್ಧೆಯ ಮುಖೇನ ಈ ಕಿರುಚಿತ್ರ ಸ್ಕ್ರೀನಿಂಗ್ ಆಗಿ ಅಲ್ಲೇ ಪ್ರದರ್ಶನವನ್ನೂ ಕಂಡಿತ್ತು.

ಪ್ರಪ್ರಥಮವಾಗಿ ಟಿ.ಪಿ ಕೈಲಾಸ್‍ಂ ಅವರ “ಟೊಳ್ಳು ಗಟ್ಟಿ” ನಾಟಕ ಚಲನಚಿತ್ರವಾಗಿ…

ಒಂದು ಕಡೆ ರಂಗಭೂಮಿಯ ನಟರಾಗಿ ಹಲವಾರು ಪಾತ್ರಗಳಿಗೆ ಜೀವ ತುಂಬುತ್ತಾ ಸಕ್ರಿಯರಾಗಿದ್ದ ಗುರುದತ್ ಇನ್ನೊಂದೆಡೆ ಪ್ರಖ್ಯಾತ ಸುಗಮ ಸಂಗೀತ ಶಿಕ್ಷಕ ಶ್ರೀ ನರಹರಿ ದೀಕ್ಷಿತ್ ಇವರಲ್ಲಿ ಸುಗಮ ಸಂಗೀತವನ್ನೂ ನಿರಂತರವಾಗಿ ಅಭ್ಯಾಸ ಮಾಡಿದರು. ತಮ್ಮ ಮೊದಲ ಕಿರುಚಿತ್ರದ ಯಶಸ್ಸಿನಿಂದ ಉತ್ಸಾಹಿತರಾಗಿ ಎರಡನೆಯ ಇನ್ನೊಂದು ಕಿರುಚಿತ್ರವನ್ನು ಮಾಡಬೇಕೆಂದುಕೊಂಡಿದ್ದರು. ಆಗ ಈ ಲೇಖಕರ ಸಲಹೆಯಂತೆ ಕಿರುಚಿತ್ರದ ಬದಲು ಎರಡು ಗಂಟೆ ಅವಧಿಯ ಚಲನಚಿತ್ರವನ್ನೇ ಮಾಡಲು ಮುಂದಾದರು.

ಸಾಕಷ್ಟು ಜನ ಹಿರಿಯ ಸಾಹಿತಿಗಳು ಹಾಗು ಅನುಭವಿಗಳೊಡನೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ಅದರ ಪರಿಣಾಮವಾಗಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕನ್ನಡದ ಅದ್ವಿತೀಯ ಲೇಖಕ ದಿವಂಗತ ಟಿ.ಪಿ ಕೈಲಾಸ್‍ಂ ಅವರ “ಟೊಳ್ಳು ಗಟ್ಟಿ” ನಾಟಕವನ್ನಾಧರಿಸಿದ ಕನ್ನಡ ಚಲನಚಿತ್ರ “ಮೂಕವಿಸ್ಮಿತ” ಎಂಬ ಹೆಸರಿನಲ್ಲಿ ಚಿತ್ರೀಕರಣವನ್ನೂ ಪೂರೈಸಿ ಪೆÇಸ್ಟ್ ಪೆÇ್ರಡಕ್ಷನ್ ಹಂತದಲ್ಲಿದೆ.

ಪಕ್ಕ ಕಮರ್ಷಿಯಲ್ ಚಿತ್ರಗಳ ನಡುವೆ ಈ ಪರಿಯ ಪ್ರಯೋಗಾತ್ಮಕ ಚಿತ್ರ :

ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಮೂಲಕವೇ ಸ್ವತಹ ನಟರಾಗಿಯೂ ಚಿತ್ರರಂಗಕ್ಕೆ ಕಾಲಿಡುತ್ತಿರುವ ಗುರುದತ್ ಈ ಚಿತ್ರದ ಎಲ್ಲಾ ಪಾತ್ರಗಳಿಗೂ ರಂಗಭೂಮಿಯ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ತಾವು ರಂಗಭೂಮಿಯ ಕಲಾವಿದರಿಗೇ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ ಎಂದಿದ್ದಾರೆ.

ಅವರ ಈ ಪ್ರಯೋಗ ಯಶಸ್ವಿಯಾಗಿ ಕನ್ನಡಕ್ಕೆ ಮತ್ತೊಬ್ಬ ಸದಭಿರುಚಿಯ ನಿರ್ದೇಶಕ ಸೇರ್ಪಡೆಯಾಗಲಿ. ಪಕ್ಕ ಕಮರ್ಷಿಯಲ್ ಚಿತ್ರಗಳನ್ನೇ ಮೀರಿಸಿ ಈ ಪ್ರಯೋಗಾತ್ಮಕ ಚಿತ್ರ ಗೆಲುವನ್ನು ಸಾಧಿಸಲಿ. ಆ ಮೂಲಕ ಇನ್ನೂ ಹೆಚ್ಚಿನ ಕನ್ನಡ ಸಾಹಿತ್ಯ ಕೃತಿಗಳು ಚಿತ್ರಗಳಾಗಲಿ. ಟೊಳ್ಳು ನಿರೀಕ್ಷೆಗಳ ನಡುವೆ ಗಟ್ಟಿ ಸಿನಿಮಾ ಎಂದು ಈ ಚಿತ್ರಕ್ಕೆ ನಿರ್ದೇಶಕರು ನೀಡಿದ ಉಪಶೀರ್ಷಿಕೆ ನಿಜವಾಗಿ ಈ ಚಿತ್ರವನ್ನು ನೋಡುವ ಎಲ್ಲಾ ಪ್ರೇಕ್ಷಕರು “ಮೂಕವಿಸ್ಮಿತ”ರಾಗುವಂತಾಗಲಿ ಎಂದು ಆಶಿಸೋಣ ಅಲ್ಲವೇ?

***********
ರಂಗಭೂಮಿಯಿಂದ ಚಿತ್ರರಂಗದವರೆಗೆ ಗುರುದತ್ ಶ್ರೀಕಾಂತ್ ನಡೆದು ಬಂದ ದಾರಿ…

* ಎಂಟನೆಯ ತರಗತಿಯಲ್ಲಿ ಇಸ್ಕಾನ್ ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಪ್ರಥಮ ಬಹುಮಾನ.

* ವಿ.ವಿ ಪುರಂನ ಶ್ರೀ ಸರಸ್ವತಿ ವಿದ್ಯಾಮಂದಿರದಲ್ಲಿ 9ನೆಯ ತರಗತಿಯಲ್ಲಿ ಕ್ಲಬ್ ಚಟುವಟಿಕೆಗಾಗಿ 2 ನಾಟಕಗಳ ನಿರ್ದೇಶನ. ಅನರಕ್ಷತೆಯ ಕುರಿತಾಗಿ ಹಾಗೂ ಮಾಡ್ರನ್ ರಾಮಾಯಣ ನಾಟಕಕ್ಕೆ ನಿರ್ದೇಶನ ಹಾಗೂ ಪ್ರಮುಖ ಪಾತ್ರದಲ್ಲಿ ನಟನೆ, ಎಲ್ಲರಿಂದ ಮೆಚ್ಚುಗೆ.

* ದ್ವಿತೀಯ ಪಿ.ಯು.ಸಿಯಲ್ಲಿ “ಚೌ ಚೌ ಬಾತ್” ಎಂಬ ಹಾಸ್ಯ ನಾಟಕವನ್ನು ಬರೆದು ನಿರ್ದೇಶನ ಮಾಡಿದ್ದು 90 ನಿಮಿಷಗಳ ಕಾಲ ಪ್ರದರ್ಶನ, ಮೆಚ್ಚುಗೆ.

* ಬಿ.ಕಾಮ್ ಓದುತ್ತಿರುವಾಗ “ಸೆಕೆಂಡ್ ಹ್ಯಾಂಡ್ ಸದಾಶಿವ” ಎಂಬ ನಾಟಕದ ಪಾತ್ರಧಾರಿಯಾಗಿ “ಅತ್ಯುತ್ತಮ ನಟ” ಪ್ರಶಸ್ತಿ. ಇದೇ ನಾಟಕವನ್ನು ನೋಡಿ ದೃಶ್ಯ ತಂಡಕ್ಕೆ ದಾಕ್ಷಾಯಣಿ ಇವರನ್ನು ಸೇರಿಸಿಕೊಂಡರು.

* ಒಥೆಲೊ ನಾಟಕದ ಇಯಾಗೊ ಎಂಬ ವಿಲನ್ ಪಾತ್ರಧಾರಿಯಾಗಿ ಯುನಿವರ್ಸಿಟಿ ಮಟ್ಟದಲ್ಲಿ “ಅತ್ಯುತ್ತಮ ನಟ” ಪ್ರಶಸ್ತಿ.

* ನಾಡಿನಾದ್ಯಂತ ಹಲವು ನಾಟಕಗಳ ಹಲವು ಪಾತ್ರಧಾರಿಯಾಗಿ ಪ್ರದರ್ಶನ, ರಂಗಭೂಮಿಯಲ್ಲಿ ಪೂರ್ಣ ಸಕ್ರಿಯ.

* ಕಿರುಚಿತ್ರಕ್ಕೆ ಬೇರೆಯವರ ಜೊತೆ ಕೆಲಸ, ತಾವೇ ಬರೆದು ನಿರ್ದೇಶಿಸಿ ನಟಿಸಿದ “ಗೇಮ್ ಆಫ್ ಶ್ಯಾಡೊ” ಬಿಡುಗಡೆ, ಪ್ರಥಮ ಪ್ರಯೋಗದಲ್ಲೇ ಯಶಸ್ವಿ.

* “ಮೂಕವಿಸ್ಮಿತ” ಚಲನಚಿತ್ರಕ್ಕೆ ನಿರ್ದೇಶಕರಾಗಿ, ನಟರಾಗಿ ಸಾರಥ್ಯ.

*********

ಚಿತ್ರ ವಿವರ :

1-ಪ್ರಖ್ಯಾತ ಸುಗಮ ಸಂಗೀತ ಶಿಕ್ಷಕ ಶ್ರೀ. ನರಹರಿ ದೀಕ್ಷಿತ್ “ಮೂಕವಿಸ್ಮಿತ” ಚಿತ್ರಕ್ಕೆ ಮುಹೂರ್ತ ಸಮಾರಂಭದಲ್ಲಿ ಆರಂಭ ಫಲಕ ತೋರುತ್ತಿರುವಾಗ..

2-ಮುಹೂರ್ತ ಸಮಾರಂಭದಲ್ಲಿ ಪ್ರಮುಖ ಕಲಾವಿದರು

3-ಮುಹೂರ್ತ ಸಮಾರಂಭದಲ್ಲಿ ಇಡೀ ಚಿತ್ರತಂಡ

ಗೇಮ್ ಆಫ್ ಶ್ಯಾಡೋಸ್ ” ಕಿರುಚಿತ್ರ

Exit mobile version