–ಚಿನ್ಮಯ.ಎಂ.ರಾವ್ ಹೊನಗೋಡು
ಹೊಸ ಹೊಸ ಕ್ಷೇತ್ರಗಳನ್ನು ದರ್ಶನ ಮಾಡುವ ಖುಷಿಯೇ ಬೇರೆ. ದೇವರು ಸರ್ವವ್ಯಾಪಿ ನಿಜ…ಆದರೂ ಮನೆಗಿಂತ ದೇವಾಲಯಗಳಲ್ಲಿ ಸಿಗುವ ಆನಂದವೇ ಬೇರೆ. ಅದರಲ್ಲೂ ಪ್ರಕೃತಿಯ ಮಡಿಲಲ್ಲಿರುವ ದೇವಸ್ಥಾನವೊಂದು ಮನಸಾರೆ ಆದರೆ ಮನಸೂರೆ…ಪದೇ ಪದೇ ಅಲ್ಲಿಗೆ ಹೋಗೋಣವೆನಿಸುತ್ತದೆ ಇದು ಖರೇ…ನೀವು ಆಗಾಗ ದರ್ಶನ ಮಾಡಬಹುದಾದ, ಯಾವಾಗಲೂ ನಿಮ್ಮನ್ನು ಬರಸೆಳೆದು ಹರಸುವ ದೇವಿಯ ಸನ್ನಿಧಿಯೊಂದರ ಪರಿಚಯ ಇಲ್ಲಿದೆ ನಿಮಗಾಗಿ.
ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವದ್ದಳ್ಳಿ (ಆಡು ಭಾಷೆಯಲ್ಲಿ) ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ.ಈ ಸ್ಥಳಕ್ಕೆ ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ. ಇಲ್ಲಿಯ ದುರ್ಗಾಂಬಾ ದೇವಿಯು ಭಗವಾನ್ ವ್ಯಾಸಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು ಐತಿಹ್ಯ ಹೊಂದಿ ಇಂದಿಗೂ ಭಕ್ತಿ-ಶಕ್ತಿಯ ಅಧಿದೇವತೆಯಾಗಿ ಭಾಕ್ತಾದಿಗಳ ಅಭೀಷ್ಠಗಳನ್ನು ನೆರವೇರಿಸುತ್ತಾ ಶ್ರೀಕ್ಷೇತ್ರದಲ್ಲಿ ನೆಲೆ ನಿಂತು ಲೋಕಪ್ರಖ್ಯಾತಳಾಗಿದ್ದಾಳೆ.
ಕ್ಷೇತ್ರದ ಇತಿಹಾಸ
ಮಹಿಷಾಸುರನನ್ನು ಶ್ರೀಮಾತೆಯು ಕಾಲಿನಿಂದ ವದೆದಿದ್ದರಿಂದ ಇದು “ವದ್ದಳ್ಳಿ” ಎಂದು ಗ್ರಾಮೀಣ ಸೊಬಗನ್ನು ಮೈಗೂಡಿಸಿಕೊಂಡಿದೆ. ಆ ದೇವಿಯು ಶಕ್ತಿರೂಪಿಣಿಯಾಗಿ ಇಲ್ಲಿ ಭಕ್ತಾನುಗ್ರಹಕ್ಕೆ ಕಾತರಳಾಗಿದ್ದಾಳೆ.
ದೇವಾಲಯದ ಆವರಣ ಪ್ರವೇಶಿಸುತ್ತಿದಂತೆಯೇ ಎಡ ಭಾಗದ ಚಂದ್ರ ಸಾಲೆಯ ಆರಂಭದಲ್ಲಿ ಶ್ರೀಧರರ ಭಾವಚಿತ್ರವಿರುವ ಸಿಂಹಾಸನವೊಂದು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಶ್ರೀಧರರು ತಮ್ಮ ಜೀವಮಾನದಲ್ಲಿ ಹೆಚ್ಚಿನ ಪ್ರವಚನವನ್ನು ಇದೇ ಕಟ್ಟೆಯಲ್ಲಿ ಕುಳಿತು ಮಾಡಿದ್ದಾರಂತೆ. ಉತ್ಸವಕಟ್ಟೆ ಅಥವ ಶ್ರೀಧರ ಪ್ರವಚನ ಕಟ್ಟೆ ಎಂದೂ ಇದನ್ನು ಸ್ಥಳೀಯರು ಕರೆಯುತ್ತಾರೆ.
ದುಷ್ಟ ರಕ್ಕಸ ಮಹಿಷಾಸುರನನ್ನು ಕಾಲಿನಿಂದ ವದ್ದ ಭಂಗಿಯಲ್ಲೇ ಇರುವ ದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ. ಹಾಗಾಗಿ ಇಲ್ಲಿ ವಿಷ್ಣು ಶಕ್ತಿಯೂ ಅಡಕವಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕ ಶ್ರೀಧರ ಭಟ್. ನವರಾತ್ರಿಯಂತಹ ವಿಶೇಷ ದಿನಗಳಲ್ಲಿ ಬೆಳ್ಳಿಯ ಮುಖವಾಡದಿಂದ ಸರ್ವಾಲಂಕೃತಳಾಗುವ ದೇವಿಯನ್ನು ಕಣ್ ತುಂಬಾ ನೋಡಿದರೆ ಎಂತಹ ನಾಸ್ತಿಕರೂ ಆಸ್ತಿರಾಗುವುದರಲ್ಲಿ ಸಂದೇಹವೇ ಇಲ್ಲ.
ಚಂದ್ರಸಾಲೆಯ ಹಿಂಭಾಗದ ಮೂಲೆಯಲ್ಲಿ ವ್ಯಾಸತೀರ್ಥ ಮತ್ತು ಆಹ್ನಿಕ ತೀರ್ಥ ಕೂಡ ಭಕ್ತರನ್ನು ಸೆಳೆಯುತ್ತದೆ. ಪುಟ್ಟ ಕೊಳದಂತಿರುವ ಇಲ್ಲಿ ಪುಟ್ಟ ಪುಟ್ಟ ಮೀನುಗಳು ಆಟ ಆಡುವುದನ್ನು ಕಂಡು ಪುಟ್ಟ ಮಕ್ಕಳು ಸಂತಸಪಡುತ್ತಾರೆ.
ದೇವಾಲಯದ ಹಿಂಭಾಗದ ಪಾಕಶಾಲೆಯ ಪಕ್ಕದಲ್ಲಿರುವ ವ್ಯಾಸಗುಹೆಯಲ್ಲಿ ಹಿಂದೆ ವ್ಯಾಸಮುನಿಗಳು ತಪಸ್ಸು ಮಾಡುತ್ತಿದ್ದರಂತೆ. ಈಗ ಅದರ ಕುರುಹನ್ನಷ್ಟೇ ನಾವು ಕಾಣಬಹುದು. ಶ್ರೀಧರರು ಇದೇ ಗುಹೆಯಿಂದ ಗುಪ್ತವಾಗಿ ಕಾಶಿಗೂ ಹೋಗುತ್ತಿದ್ದಾರೆಂಬ ಪ್ರತೀತಿ ಇದೆ.
ದೇವಾಲಯದ ಗುಡ್ಡದ ಮೂಲದಿಂದ ಬರುವ ದೇವೀ ತೀರ್ಥವು ದೇವಾಸ್ಥಾನದ ಪಕ್ಕದಲ್ಲಿರುವ ಪುಷ್ಕರಿಣಿಯಲ್ಲಿ ಶೇಖರವಾಗುತ್ತದೆ. ಪಾವಿತ್ರ್ಯ ಭರಿತ ಈ ತೀರ್ಥಪಾನದಿಂದ ಸಕಲ ದುರಿತಗಳೂ,ಭವರೋಗವೂ ನಿವಾರಣೆಯಾಗುತ್ತದೆ.
ಹಿಂದೆ ಯಾವುದೋ ಕಾಲದಲ್ಲಿ ಮಠವೊಂದು ಇಲ್ಲಿ ಇತ್ತಂತೆ. ಆ ಮಾಠದ ಯತಿಗಳಿಂದ ಸ್ಥಾಪಿತವಾದ ಈ ರಾಮದೇವಾಲಯದಲ್ಲಿ ಇಂದಿಗೂ ಪೂಜೆ ನಡೆದುಕೊಂಡು ಬರುತ್ತಿದೆ.
ಸಾಕ್ಷಾತ್ ಶ್ರೀಧರ ಸ್ವಾಮಿಗಳಿಂದ ಪ್ರತಿಷ್ಠಾಪನೆಗೊಂಡ ನಾಗಬನ ಹಿಂಭಾಗದ ಗುಡ್ಡದ ಮೇಲಿದೆ. “ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯಾವ ರೀತಿ ನೀನು ಭಕ್ತರ ಹರಕೆಯನ್ನು ಸ್ವೀಕರಿಸಿ ಭಕ್ತಾದಿಗಳನ್ನು ಹರುಸುವೆಯೊ ಅದೇ ರೀತಿ ಇಲ್ಲಿ ಕೂಡ ಭಕ್ತರಿಗೆ ಅನುಗ್ರಹಿಸು” ಎಂದು ಪ್ರತಿಷ್ಠಾಪನೆಯಲ್ಲಿ ಶ್ರೀಧರರು ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರಂತೆ. ಅಂತೆಯೇ ಇಂದಿಗೂ ಭಕ್ತಿಯಿಂದ ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸುವವರಿಗೆ ಇಷ್ಠಾರ್ಥ ಸಿದ್ಧಿಯಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ-ಈ ದೇವಾಲಯದ ಕಛೇರಿಯ ದೂರವಾಣಿ ಸಂಖ್ಯೆ-೦೮೧೮೩-೨೩೬೧೪೫
ಚಿನ್ಮಯ.ಎಂ.ರಾವ್ ಹೊನಗೋಡು
೨೦-೮-೨೦೧೧
**************